ADVERTISEMENT

‘ಪ್ರಾದೇಶಿಕ ಸಂಸ್ಕೃತಿ ಎತ್ತಿ ಹಿಡಿಯಿರಿ’

ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಕರೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 16:13 IST
Last Updated 1 ನವೆಂಬರ್ 2019, 16:13 IST
ಮಡಿಕೇರಿಯ ಹಳೇ ಕೋಟೆ ಆವರಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಗೌರವ ವಂದನೆ ಸ್ವೀಕರಿಸಿದ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌
ಮಡಿಕೇರಿಯ ಹಳೇ ಕೋಟೆ ಆವರಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಗೌರವ ವಂದನೆ ಸ್ವೀಕರಿಸಿದ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌   

ಮಡಿಕೇರಿ: ನಗರದಲ್ಲಿ ಹಳೇ ಕೋಟೆ ಆವರಣದಲ್ಲಿ ಶುಕ್ರವಾರ ಕನ್ನಡದ ಸಂಭ್ರಮ ಮನೆ ಮಾಡಿತ್ತು. ಮಳೆ ಬಿಡುವು ನೀಡಿ ಬಿಸಿಲು ಕಾಣಿಸಿಕೊಂಡಿದ್ದರ ಪರಿಣಾಮ ಕನ್ನಡ ಹಬ್ಬದ ಸಡಗರ ಇಮ್ಮಡಿಗೊಂಡಿತ್ತು. ಎಲ್ಲೆಡೆ ಕನ್ನಡ ಕಲರವ

ಜಿಲ್ಲಾಡಳಿತದಿಂದ ನಡೆದ ರಾಜ್ಯೋತ್ಸವದಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅನೀಸ್‌ ಕಣ್ಮಣಿ ಜಾಯ್‌ ಅವರು, ‘ಸ್ವಾತಂತ್ರ್ಯ ಪೂರ್ವದಲ್ಲಿ ವಿವಿಧ ಕಾರಣಗಳಿಂದ ಹಂಚಿ ಹೋಗಿದ್ದ ಪ್ರದೇಶಗಳನ್ನು ಭಾಷಾ ಪುನರ್ವಿಂಗಡಣೆ ಆಧಾರದ ಮೇಲೆ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ, 1956ರ ನ.1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರಿರುವ ಪ್ರದೇಶಗಳನ್ನು ಒಟ್ಟುಗೂಡಿಸುವಲ್ಲಿ ಇದು ತಕ್ಕಮಟ್ಟಿಗೆ ಯಶಸ್ವಿಯೂ ಆಯಿತು’ ಎಂದರು.
ಹಲವರ ಪ್ರಯತ್ನದಿಂದ 1973 ನವೆಂಬರ್‌ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದೂ ನಾಮಕರಣ ಮಾಡಲಾಯಿತು ಎಂದು ಜಿಲ್ಲಾಧಿಕಾರಿ ಹೇಳಿದರು.

ADVERTISEMENT

‘ಈ ನಾಡಿನ ಜನರು ಶೂರರು, ವೀರರು, ತ್ಯಾಗಿಗಳು, ಸ್ವಾಭಿಮಾನಿಗಳು, ಸಜ್ಜನರು, ಶಾಂತಿ ಪ್ರಿಯರು ಹಾಗೂ ಚಿಂತಕರೂ ಆಗಿದ್ದಾರೆ. ಶ್ರೀಮಂತ ಪರಂಪರೆಯುಳ್ಳ ನಮ್ಮ ನಾಡಿನ ನೆಲ, ಜಲ, ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ರಕ್ಷಿಸುವುದು ಕನ್ನಡಿಗರಾದ ನಮ್ಮೆಲ್ಲರ ಹೊಣೆ. ಕರುನಾಡ ಜನರ ಮನಸ್ಸಿನಲ್ಲಿ ಕನ್ನಡಾಭಿಮಾನ ಬೀಜವನ್ನು ಬಿತ್ತುವುದರ ಮೂಲಕ ಕನ್ನಡ ನಾಡಿನ ಗರಿಮೆಯನ್ನು ಇನ್ನೂ ಉತ್ತುಂಗಕ್ಕೇರಿಸಲು ಎಲ್ಲ ಕನ್ನಡಿಗರೂ ಪ್ರಯತ್ನಿಸಬೇಕಿದೆ’ ಎಂದು ಜಿಲ್ಲಾಧಿಕಾರಿ ನುಡಿದರು.

‘ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ ಹಾಗೂ ಸೌಂದರ್ಯವಿದೆ. ಆದ್ದರಿಂದ, ಪ್ರಾದೇಶಿಕ ಸಂಸ್ಕೃತಿ ಎತ್ತಿಹಿಡಿಯಿರಿ’ ಎಂದು ಡಿ.ಸಿ ನುಡಿದರು.
‘ಕಳೆದ ಮೂರು ತಿಂಗಳಿಂದ ಕರ್ನಾಟಕದ ಎಲ್ಲ ಭಾಗಗಳಲ್ಲೂ ಧಾರಾಕಾರ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ. ಕನ್ನಡಿಗರು ಧೃತಿಗೆಡದೇ ತಮ್ಮ ಆತ್ಮಸ್ಥೈರ್ಯದಿಂದ ಪರಿಸ್ಥಿತಿ ಎದುರಿಸಿ ಬದುಕು ಕಟ್ಟಿಕೊಳ್ಳುತ್ತಿರುವುದು ಗಟ್ಟಿತನಕ್ಕೆ ಉದಾಹರಣೆ’ ಎಂದು ಶ್ಲಾಘಿಸಿದರು.

ಕವಿ ಡಿ.ಎಸ್‌.ಕರ್ಕಿ ಅವರ ಆಶಯದಂತೆ ಗಡಿನಾಡೇ ಇರಲಿ, ನಡುನಾಡೇ ಇರಲಿ, ಕನ್ನಡದ ಶಾಂತಿಯನ್ನು ಹೆಚ್ಚಿಸಿ ಮನ ಮನೆಗಳಲ್ಲಿ ಕನ್ನಡದ ದೀಪವನ್ನು ಹಚ್ಚಬೇಕಿದೆ. ಇದಕ್ಕಾಗಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಪಾಲ್ಗೊಂಡಿದ್ದರು.

ಮೆರವಣಿಗೆಗೆ ಚಾಲನೆ:
ನಗರದ ಗಾಂಧಿ ಮಂಟಪದ ಬಳಿ ಸ್ತಬ್ಧಚಿತ್ರದ ಮೆರವಣಿಗೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರೋಳಿ, ಪಶುಪಾಲನಾ ಉಪ ನಿರ್ದೇಶಕ ತಮ್ಮಯ್ಯ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಪೌರಾಯುಕ್ತ ಎಂ.ಎಲ್.ರಮೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಚಾಲನೆ ನೀಡಿದರು.

ಆಕರ್ಷಕ ಪಥಸಂಚನ:
ಹಳೇ ಕೋಟೆ ಆವರಣದಲ್ಲಿ ನಡೆದ ರಾಜ್ಯೋತ್ಸವದಲ್ಲಿ ಪಥಸಂಚಲನವು ಆಕರ್ಷಕವಾಗಿತ್ತು. ಪೊಲೀಸ್, ಸ್ಕೌಟ್‌ ಅಂಡ್‌ ಗೈಡ್ಸ್‌ ಹಾಗೂ ಶಾಲಾ ಮಕ್ಕಳು ‍ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.