ಮಡಿಕೇರಿ: ಕೊಡಗಿನಲ್ಲಿ ಆರಿದ್ರಾ ಮಳೆಯ ಅಬ್ಬರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ನದಿ, ತೊರೆಗಳೆಲ್ಲ ಉಕ್ಕಿ ಹರಿಯುತ್ತಿವೆ. ಮತ್ತಷ್ಟು ಭಾರಿ ಮಳೆ ಬೀಳುವ ಮುನ್ನಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇದರ ಬೆನ್ನಲ್ಲೇ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜೂನ್ 27ರಂದು ರಜೆ ನೀಡಿ ಆದೇಶಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಗುರುವಾರ ಮಧ್ಯಾಹ್ನದ ನಂತರ ಮಳೆ ಮತ್ತು ಗಾಳಿ ತೀವ್ರತೆ ಇನ್ನಷ್ಟು ಹೆಚ್ಚಾಗಿದೆ. ಒಂದೇ ಸಮನೆ ಸುರಿಯುತ್ತಿರುವ ಭಾರಿ ಮಳೆಯು ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುವವರಲ್ಲಿ ಆತಂಕ ಮೂಡಿಸಿದೆ.
ಮತ್ತೊಂದೆಡೆ, ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲೂ ವರುಣ ಅಬ್ಬರಿಸುತ್ತಿದ್ದು, ನದಿ ನೀರು ರಸ್ತೆಗಳಿಗೆ ನುಗ್ಗಿದೆ. ಕಕ್ಕಬ್ಬೆ ಗ್ರಾಮ ದ್ವೀಪದಂತಾಗಿದ್ದರೆ, ನಾಪೋಕ್ಲು ಪಟ್ಟಣ ದ್ವೀಪವಾಗುವತ್ತ ಸಾಗಿದೆ. ನಾಪೋಕ್ಲುವಿಗೆ ಮಡಿಕೇರಿ ಮತ್ತು ಭಾಗಮಂಡಲದೊಂದಿಗೆ ಮಾತ್ರ ಸಂಪರ್ಕವಿದ್ದು, ಉಳಿದ ಕಡೆಯ ಸಂಪರ್ಕ ತಪ್ಪಿದೆ.
ಜಿಲ್ಲೆಯ ಪ್ರಮುಖ ನದಿಗಳಾದ ಕಾವೇರಿ, ಕನ್ನಿಕಾ, ಲಕ್ಷ್ಮಣತೀರ್ಥ, ಬರಪೊಳೆ ಹಾಗೂ ಇತರೆ ಹೊಳೆ, ತೋಡುಗಳು ಅಪಾಯದ ಅಂಚನ್ನು ಮೀರಿವೆ. ಕರಡಿಗೋಡು ಗ್ರಾಮದ ಸಮೀಪ ಕಾವೇರಿ ನದಿ ನೀರು ಒಂದೇ ಸಮನೆ ಏರುತ್ತಿದ್ದು, ಯಾವುದೇ ಸಮಯದಲ್ಲಿ ಮನೆಗಳಿಗೆ ನುಗ್ಗುವ ಸಾಧ್ಯತೆಗಳಿವೆ.
ಹಲವೆಡೆ ಹಾನಿ
ಅರಪಟ್ಟು ಗ್ರಾಮದ ಜುನೈದ್ ಅವರ ಮನೆಯ ಹಿಂಭಾಗ ಮಣ್ಣು ಕುಸಿದು ಹಾನಿಯಾಗಿದೆ. ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ರಸ್ತೆ ಕಾವೇರಿ ನದಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದು, ಅಂದಾಜು ರಸ್ತೆಯಲ್ಲಿ 4 ಅಡಿ ನೀರು ಇರುತ್ತದೆ. ಸದ್ಯ, ಇಲ್ಲಿಗೆ ಬದಲಿ ರಸ್ತೆ ಇದೆ. ಈ ಬಗ್ಗೆ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಅಪಾಯದ ಸ್ಥಳಗಳಿಗೆ ತೆರಳದಂತೆ ಹಾಗೂ ಆ ಭಾಗದ ಜನರಿಗೆ ಕಾಳಜಿ ಕೇಂದ್ರಕ್ಕೆ ಬರಲು ಸೂಚಿಸಿದ್ದಾರೆ.
ಎಮ್ಮೆಮಾಡು ಗ್ರಾಮದ ಕದಿಸಮ್ಮ ಅವರ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆ ಬಿದ್ದು ಹಾನಿಯಾಗಿದೆ. ಮತ್ತೊಂದು ಗೋಡೆ ಬಿರುಕು ಬಿಟ್ಟಿದೆ.
ವಿರಾಜಪೇಟೆ ಹೋಬಳಿ ದೇವಣಗೇರಿ ಗ್ರಾಮದ ನಿವಾಸಿ ಎಚ್.ಹರೀಶ ಅವರ ವಾಸದ ಮನೆ ಮಳೆಯಿಂದಾಗಿ ಭಾಗಶಃ ಕುಸಿದಿದೆ. ಹಾಗಾಗಿ, ಕುಟುಂಬದ ಸದಸ್ಯರನ್ನು ಪಕ್ಕದ ಮನೆಗೆ ಸ್ಥಳಾಂತರಿಸಿ ಆಹಾರ ಕಿಟ್ ಅನ್ನು ವಿತರಿಸಲಾಗಿದೆ.
ತಿಂಗಳಲ್ಲಿ 3ನೇ ಬಾರಿ ತ್ರಿವೇಣಿ ಸಂಗಮ ಜಲಾವೃತ
ಭಾಗಮಂಡಲದ ತ್ರಿವೇಣಿ ಸಂಗಮವು ಒಂದು ತಿಂಗಳಿನಲ್ಲಿ 3ನೇ ಬಾರಿಗೆ ಸಂಪೂರ್ಣ ಜಲಾವೃತಗೊಂಡಿದೆ. ಪುಷ್ಪೋದ್ಯಾನ ಸೇರಿದಂತೆ ತ್ರಿವೇಣಿ ಸಂಗಮದ ಆಸುಪಾಸಿನ ಸ್ಥಳಗಳಿಗೂ ನೀರು ನುಗ್ಗಿದೆ. ಕಾವೇರಿ, ಕನ್ನಿಕಾ ನದಿಗಳು ಭೋರ್ಗರೆಯುತ್ತಿವೆ.
ಕೊಡಗಿನಲ್ಲಿ ಮುಂದುವರೆದ ರೆಡ್ ಅಲರ್ಟ್ ಮಡಿಕೇರಿಯಲ್ಲಿ ಭಾರಿ ಮಳೆ ಉಕ್ಕೇರುತ್ತಿವೆ ನದಿ ತೊರೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.