
ಮಡಿಕೇರಿ: ‘ಜಮ್ಮಾಬಾಣೆ ಸಮಸ್ಯೆ ಈ ಹಿಂದೆಯೇ ಶೇ 99ರಷ್ಟು ಭಾಗ ಇತ್ಯರ್ಥವಾಗಿತ್ತು’ ಎಂದು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಪ್ರತಿಪಾದಿಸಿದರು.
‘ನ್ಯಾಯಾಲಯದ ಆದೇಶವನ್ನು ಕರಾರುವಕ್ಕಾಗಿ ಅನುಷ್ಠಾನಕ್ಕೆ ತಂದಿದ್ದರೆ ಹಾಗೂ ಕಾಂಗ್ರೆಸ್ ಸರ್ಕಾರವೇ ಹೊರಡಿಸಿದ್ದ ಸುತ್ತೋಲೆಯೊಂದನ್ನು ವಾಪಸ್ ಪಡೆದಿದ್ದರೆ ಈಗ ಪ್ರಸ್ತುತ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸುವ ಅಗತ್ಯವೇ ಇರುತ್ತಿರಲಿಲ್ಲ’ ಎಂದು ಅವರು ಇಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ 2011 ಡಿಸೆಂಬರ್ 16ರಲ್ಲಿ ‘ 2011ನೇ ಸಾಲಿನ ಕರ್ನಾಟಕ ಭೂ ಕಂದಾಯ (2ನೇ ತಿದ್ದುಪಡಿ) ವಿಧೇಯಕ’ವನ್ನು ಮಂಡಿಸಿ ಸದನದ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಆಗಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಿದರು. ಅಂತಿಮವಾಗಿ, ಆಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈ ಮಸೂದೆಗೆ ಅಂಕಿತ ಹಾಕಿದ ನಂತರ 2013ರ ಫೆಬ್ರುವರಿ 1ರಂದು ಜಾರಿಗೆ ಬಂದಿತು ಎಂದು ಕೆ.ಜಿ.ಬೋಪಯ್ಯ ತಿಳಿಸಿದರು.
ಈ ಕಾನೂನಿನ ವಿರುದ್ಧ 43 ಮಂದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಸುದೀರ್ಘವಾಗಿ ವಿಚಾರಣೆ ನಡೆಸಿದ ನ್ಯಾಯಾಲಯವು 2024ರ ಜುಲೈ 25ರಂದು ಈ ಅರ್ಜಿಗಳನ್ನು ವಜಾಗೊಳಿಸಿ ಜಮ್ಮಾಬಾಣೆ ಕುರಿತು ಸ್ಪಷ್ಟವಾಗಿ ತೀರ್ಮಾನ ನೀಡಿತು. ಜೊತೆಗೆ, ಈ ತೀರ್ಪನ್ನು ಒಂದು ತಿಂಗಳೊಳಗೆ ಜಾರಿಗೊಳಿಸಬೇಕು ಎಂದೂ ಸೂಚಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಈ ಆದೇಶವನ್ನು ಜಾರಿಗೆ ತರಲಿಲ್ಲ ಎಂದು ಆರೋಪಿಸಿದರು.
ಈ ಮಧ್ಯೆ ಬಿಜೆಪಿ ಸರ್ಕಾರ 2020ರಲ್ಲಿ ನೋಟರಿ ಅಫಿಡವಿಡ್ ಕೊಡುವ ಮೂಲಕ ಸುಲಲಿತವಾಗಿ ವಿಭಾಗ ಮಾಡಿಕೊಡುವಂತಹ ಸುತ್ತೋಲೆಯೊಂದನ್ನು ಜಾರಿಗೆ ತಂದಿತ್ತು. ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ 2024ರ ಜನವರಿ 31ರಂದು ಸುತ್ತೋಲೆಯೊಂದನ್ನು ಹೊರಡಿಸಿ, ವಿಭಾಗ ಪತ್ರಗಳು ನೋಂದಾಯಿತವಾಗಿದ್ದಲ್ಲಿ ಮಾತ್ರವೇ ಮ್ಯೂಟೆಶನ್ ಮಾಡಬೇಕು ಎಂದು ಸೂಚಿಸಿತು. ಇಲ್ಲಿಂದ ಸಮಸ್ಯೆ ಆರಂಭವಾಯಿತು ಎಂದು ಅವರು ಅಭಿಪ್ರಾಯಪ್ಟರು.
ಸರ್ಕಾರ ತಾನೆ ಹೊರಡಿಸಿದ ಈ ಸುತ್ತೋಲೆಯನ್ನು ವಾಪಸ್ ಪಡೆದಿದ್ದರೆ ಅಥವಾ 2024ರಲ್ಲಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಜಾರಿಗೊಳಿಸಿದ್ದರೆ ಈಗ ಈ ವಿಧೇಯಕ ಮಂಡಿಸುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.
ಕಾನೂನು ತಜ್ಞ ಕವೀಂದ್ರ ಅವರು ಮಾತನಾಡಿ, ‘ಈ ವಿಧೇಯಕದಲ್ಲೂ ಯಾವುದೇ ಸ್ಪಷ್ಟತೆ ಇಲ್ಲ. ನಿಯಮಾವಳಿಗಳನ್ನು ರಚಿಸಿಲ್ಲ. ತಹಶೀಲ್ದರ್ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅಪೀಲಿಗೂ ಅವಕಾಶ ಕೊಡಲಾಗಿದೆ. ಇದರಿಂದ ಇದು ಭ್ರಷ್ಟಾಚಾರಕ್ಕೆ ದಾರಿಯಾಗುವ ಹಾಗೂ ವಿವಾದವನ್ನು ಅನಾವಶ್ಯವಾಗಿ ವರ್ಷಾನುಗಟ್ಟಲೆ ಎಳೆದಾಡುವಂತಾಗುವ ಸಾಧ್ಯತೆಗಳೇ ಹೆಚ್ಚಿವೆ’ ಎಂದು ಹೇಳಿದರು.
ಏಜೆಂಟರು ಎಂದಿದ್ದು ನೋವು ತರಿಸಿತು; ಅಪ್ಪಚ್ಚುರಂಜನ್
ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ‘ಕಂದಾಯ ಸಚಿವರು ಪಟ್ಟೆದಾರರನ್ನು ಬ್ರಿಟಿಷರ ಏಜೆಂಟರು ಎಂದು ಹೇಳಿದ್ದು ನೋವು ತರಿಸಿತು’ ಎಂದು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ 2011ರಲ್ಲಿ ಕರ್ನಾಟಕ ಭೂ ಕಂದಾಯ (2ನೇ ತಿದ್ದುಪಡಿ)ವಿಧೇಯಕ ಮಂಡಿಸುವಾಗ ಪಕ್ಷಾತೀತವಾಗಿ ಎಲ್ಲರ ವಿಶ್ವಾಸ ಪಡೆಯಲಾಗಿತ್ತು. ಎ.ಕೆ.ಸುಬ್ಬಯ್ಯ ಅವರೂ ಹಲವು ಸಲಹೆಗಳನ್ನು ನೀಡಿದ್ದರು. ಆದರೆ ಈಗಿನ ಸರ್ಕಾರ ಈ ವಿಧೇಯಕ ಮಂಡಿಸುವಾಗ ಯಾರನ್ನೂ ವಿಶ್ವಾಸಕ್ಕೆ ಪಡೆದಿಲ್ಲ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.