ADVERTISEMENT

ಲೇಖಕಿ ಕೃಪಾ ದೇವರಾಜ್‌ಗೆ ಕೊಡಗಿನ ಗೌರಮ್ಮ ಪ್ರಶಸ್ತಿ

ಸಾರಸ್ವತ ಲೋಕವಾಗಿ ಬದಲಾದ ಪತ್ರಿಕಾ ಭವನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:52 IST
Last Updated 12 ಫೆಬ್ರುವರಿ 2026, 7:52 IST
<div class="paragraphs"><p>ಕನ್ನಡ ಸಾಹಿತ್ಯ ಪರಿಷತ್ತಿನ&nbsp;ಕೊಡಗು ಜಿಲ್ಲಾ ಘಟಕದ ವತಿಯಿಂದ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ಯನ್ನು ಲೇಖಕಿ ಕೃಪಾ ದೇವರಾಜ್ ಅವರಿಗೆ ಬುಧವಾರ ಮಡಿಕೇರಿಯ ಪತ್ರಿಕಾ ಭವನದಲ್ಲಿ ಪ್ರದಾನ ಮಾಡಲಾಯಿತು</p></div>

ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ವತಿಯಿಂದ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ಯನ್ನು ಲೇಖಕಿ ಕೃಪಾ ದೇವರಾಜ್ ಅವರಿಗೆ ಬುಧವಾರ ಮಡಿಕೇರಿಯ ಪತ್ರಿಕಾ ಭವನದಲ್ಲಿ ಪ್ರದಾನ ಮಾಡಲಾಯಿತು

   

ಮಡಿಕೇರಿ: ಇಲ್ಲಿನ ಪತ್ರಿಕಾ ಭವನ ಸಾರಸ್ವತ ಭವನವಾಗಿ ಬದಲಾಯಿತು. ಜಿಲ್ಲೆಯ ಹಿರಿಯ ಸಾಹಿತಿಗಳಿಂದ ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಬುಧವಾರ ಲೇಖಕಿ ಕೃಪಾ ದೇವರಾಜ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಕೊಡಮಾಡುವ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯ‌ನ್ನು ಸ್ವೀಕರಿಸಿದರು.

ಪರಿಷತ್ತು ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ಬುಧವಾರ ಇಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಹಿರಿಯ, ಕಿರಿಯ ಸಾಹಿತಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು. ಇವರ ಸಮ್ಮುಖದಲ್ಲಿ ಕೃಪಾ ದೇವರಾಜ್ ಮಾತ್ರವಲ್ಲ, ಗೌರಮ್ಮ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಎ.ಐ.ಕುಬ್ರಾ, ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಬಿ.ಎನ್.ಹರ್ಷಿತಾ ಮತ್ತು ತೃತೀಯ ಸ್ಥಾನ ಪಡೆದ ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಪಾನುಪ್ರಿಯ ಅವರೂ ಬಹುಮಾನಗಳನ್ನು ಸ್ವೀಕರಿಸಿದರು.

ADVERTISEMENT

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕಿ ಎಸ್.ಎಂ.ರಜನಿ, ‘ಪ್ರಶಸ್ತಿಗೆ ಆಯ್ಕೆಯಾಗಿರುವ ಕೃಪಾದೇವರಾಜ್ ಅವರ ‘ಮಂತ್ರ ಪುಷ್ಪ’ ಕೃತಿಯ ಕಥೆಗಳು ನಮ್ಮೊಡನೆ ಮಾತನಾಡುತ್ತವೆ’ ಎಂದು ಶ್ಲಾಘಿಸಿದರು.

ಈಗ ಎಲ್ಲೆಡೆ ಮೊಬೈಲ್‌ಗಳ ಹಾವಳಿ ಇದೆ. ಅವುಗಳಿಗೆ ದಾಸರಾಗದೆ ಮೊಬೈಲ್‌ ಮೂಲಕ ಕನ್ನಡದ ಕೆಲಸ ಮಾಡೋಣ ಎಂದರು.

ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿ.ರವಿಕುಮಾರ್ ಮಾತನಾಡಿ, ‘ಪ್ರಸ್ತುತ ಪುಸ್ತಕಗಳನ್ನು ಓದುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಇದರಿಂದ ಹೊರಬಂದು ಸಾಹಿತ್ಯಾಸಕ್ತಿಯನ್ನು ಪ್ರತಿಯೊಬ್ಬರೂ ಮೂಡಿಸಿಕೊಂಡು, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಮಾತನಾಡಿ, ‘ಶತಮಾನಗಳ ಹಿಂದೆ ಕೊಡಗಿನ ಗೌರಮ್ಮ ಅವರು ರಚಿಸಿರುವ ಪ್ರಗತಿಪರವಾದ, ಮಹಿಳಾ ಸಂವೇದನೆಯ ಕತೆಗಳು ಇಂದಿಗೂ ಕನ್ನಡ ಸಾಹಿತ್ಯ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಿವೆ ಎಂದರೆ, ಆ ಕಥೆಗಳಲ್ಲಿನ ಸಾಹಿತ್ಯದ ಗಟ್ಟಿತನವೇ ಅದಕ್ಕೆ ಕಾರಣ. ಗೌರಮ್ಮನವರು ಅಂದು ರಚಿಸಿರುವ ಸಾಹಿತ್ಯ ಯುವ ಬರಹಗಾರರಿಗೆ ಪ್ರೇರಣೆಯನ್ನು ನೀಡಿದೆ ಮತ್ತು ಮುಂದೆಯೂ ನೀಡುತ್ತಲೇ ಇರುತ್ತದೆ’ ಎಂದು ತಿಳಿಸಿದರು.

ಕಡಗದಾಳು ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಪನ್ಯಾಸಕಿ ಪ್ರತಿಮಾ ರೈ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹಮ್ಮದ್, ರೇವತಿ ರಮೇಶ್, ಜಿಲ್ಲಾ ಕಸಾಪ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್ ಭಾಗವಹಿಸಿದ್ದರು.

‘ಕೃತಿಗಳ ಕುರಿತು ವಿಚಾರಗೋಷ್ಠಿ ಆಯೋಜಿಸಲಿ’

ಸಮಾರಂಭ ಉದ್ಘಾಟಿಸಿದ ಸಾಹಿತಿ ಸುಬ್ರಾಯ ಸಂಪಾಜೆ ಅವರು ಕೊಡಗಿನ ಪಟ್ಟೋಲೆ ಪಳಮೆ ಕೊಡವ ಜಯ ಭಾರತ ಸೇರಿದಂತೆ ಹಲವು ಕೃತಿಗಳನ್ನು ಉಲ್ಲೇಖಿಸಿ ಇಂತಹ ಅಮೂಲ್ಯ ಕೃತಿಗಳ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕವು ವಿಚಾರಗೋಷ್ಠಿ ಸಂವಾದಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು. ಡುಂಡಿರಾಜ್ ಅವರ ‘ಮೊನ್ನೆ ಅವಳು ಸಿಕ್ಕಳು ನನ್ನ ನೋಡಿ ನಕ್ಕಳು ನಮಗೀಗ ಎರಡು ಮಕ್ಕಳು’ ಎಂಬ ಹನಿಗವಿತೆ ಉಲ್ಲೇಖಿಸಿ ಕಥೆ ಎಲ್ಲದರಲ್ಲೂ ಇರುತ್ತದೆ. ಕಥೆ ಎಲ್ಲರ ಗಮನವನ್ನೂ ಸೆಳೆಯುತ್ತದೆ ಎಂದರು. ಇದೇ ವೇಳೆ ಅವರು ಗಮಕಗಳನ್ನು ಹಾಡಿ ಸಮಾರಂಭದ ಮೆರುಗು ಹೆಚ್ಚಿಸಿದರು.

ಮಾತುಗಳು ಮೂಕವಾಗಿವೆ: ಕೃಪಾ ದೇವರಾಜ್

ತುಸು ಭಾವುಕವಾಗಿಯೇ ಮಾತಿಗಿಳಿದ ಕೊಡಗಿನ ಗೌರಮ್ಮ ಪ್ರಶಸ್ತಿ ‍ಪುರಸ್ಕೃತೆ ಕೃಪಾ ದೇವರಾಜ್ ‘ಕೊಡಗಿನ ಗೌರಮ್ಮ ಪ್ರಶಸ್ತಿ ಸಿಗಬೇಕು ಎನ್ನುವುದು ಜಿಲ್ಲೆಯ ಪ್ರತಿಯೊಬ್ಬ ಲೇಖಕಿಯರ ಕನಸು. ಆ ಕನಸು ನನಗೆ ಈಡೇರಿದ ಹೊತ್ತು ಇದಾಗಿದೆ. ಈಗ ಮಾತುಗಳು ಮೂಕವಾಗಿವೆ ಕೃತಜ್ಞತೆಯಷ್ಟೇ ಉಳಿದಿದೆ’ ಎಂದು ಹೇಳಿದರು. ‘ಬಾಲ್ಯದಲ್ಲಿ ಪುಸ್ತಕ ಮತ್ತು ಪತ್ರಿಕೆಗಳು ಮನೆಯಲ್ಲಿದ್ದವು. ಬಸ್‌ನಲ್ಲೂ ನಾವು ಅವುಗಳನ್ನು ಓದುತ್ತಿದ್ದೆವು. ಆಗ ಓದಿದ್ದರಿಂದ ಈಗ ಇಲ್ಲಿ ಬಂದು ನಿಲ್ಲಲು ಸಾಧ್ಯವಾಯಿತು. ಎಲ್ಲರೂ ಓದುತ್ತಾ ಹೋಗಿ ಬರೆಯಲು ಸಾಧ್ಯವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.