ಮಡಿಕೇರಿ: ಸಾರ್ವಜನಿಕರ ಆಗ್ರಹ ಹಾಗೂ ಮಳೆ ಮುನ್ಸೂಚನೆಯಿಂದ ಜಿಲ್ಲಾಡಳಿತ ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮವನ್ನು ಒಳಾಂಗಣದಲ್ಲೆ ನಡೆಸಲು ಸೋಮವಾರ ನಿರ್ಧರಿಸಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ಜೂನ್ 21 ರಂದು ಬೆಳಿಗ್ಗೆ 6.30ರಿಂದ 8 ಗಂಟೆಯವರೆಗೆ ನಗರದ ಕೆಳಗಿನ ಗೌಡ ಸಮಾಜದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಕೆ.ಜಿ.ಬೋಪಯ್ಯ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ ಭಾಗವಹಿಸಲಿದ್ದಾರೆ.
‘620 ಮಂದಿ ಯೋಗಾಭ್ಯಾಸಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆಲ್ಲ ಈಗಾಗಲೇ ಟೀಶರ್ಟ್ ವಿತರಿಸಲಾಗಿದೆ. ಯೋಗ ಕಾರ್ಯಕ್ರಮ ಮುಗಿದ ನಂತರ ಎಲ್ಲರಿಗೂ ಲಘು ಉಪಾಹಾರ ನೀಡಲಾಗುವುದು’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ರೇಣುಕಾದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಮಳೆ ಇಲ್ಲದಿದ್ದಲ್ಲಿ ಸಾಯಿ ಟರ್ಫ್ ಮೈದಾನದಲ್ಲಿ ಕಾರ್ಯಕ್ರಮ ನಡೆಸುವುದಾಗಿ ಜಿಲ್ಲಾಡಳಿತ ಈ ಮೊದಲು ಪ್ರಕಟಿಸಿತ್ತು. ಆದರೆ, ಬದಲಾಗುತ್ತಿರುವ ಹವಾಮಾನ, ಪದೇ ಪದೇ ಬೀಳುತ್ತಿರುವ ಜಿಟಿಜಿಟಿ ಮಳೆಯ ಕಾರಣಕ್ಕೆ ಕಾರ್ಯಕ್ರಮವನ್ನು ಒಳಾಂಗಣದಲ್ಲೇ ನಡೆಸಬೇಕು ಎನ್ನುವ ಒತ್ತಾಯ ಯೋಗಾಭ್ಯಾಸಿಗಳಿಂದ ವ್ಯಕ್ತವಾಗಿತ್ತು. ಈ ಕುರಿತು ‘ಪ್ರಜಾವಾಣಿ’ ಭಾನುವಾರವಷ್ಟೇ ವಿಶೇಷ ವರದಿ ಪ್ರಕಟಿಸಿತ್ತು. ಅಂತಿಮ ಗಳಿಗೆಯಲ್ಲಿ ತನ್ನ ನಿರ್ಧಾರದಿಂದ ಹಿಂದೆ ಸರಿದ ಜಿಲ್ಲಾಡಳಿತವು ಮಳೆಯ ಮುನ್ಸೂಚನೆಯಿಂದಾಗಿ ಕೆಳಗಿನ ಗೌಡ ಸಮಾಜದ ಸಭಾಂಗಣದಲ್ಲಿ ನಡೆಸುವುದಾಗಿ ಪ್ರಕಟಿಸಿದೆ.
‘ಈಗಾಗಲೇ ನೋಂದಣಿ ಮಾಡಿಕೊಂಡಿರುವ ಎಲ್ಲ ಯೋಗಾಭ್ಯಾಸಿಗಳಿಗೆ ಸ್ಥಳದ ಮಾಹಿತಿ ನೀಡಲಾಗಿದೆ’ ಎಂದು ರೇಣುಕಾದೇವಿ ಹೇಳಿದರು.
ಆಯುಷ್ ಇಲಾಖೆ ವತಿಯಿಂದ ಕುಶಾಲನಗರ ಮತ್ತು ಸೋಮವಾರಪೇಟೆಗಳಲ್ಲಿಯೂ ಕಾರ್ಯಕ್ರಮ ಆಯೋಜನೆಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.