
ಮಡಿಕೇರಿ: ‘ಕೊಡಗಿನ ಅರೆಭಾಷಿಕ ಜನಾಂಗದ ಶ್ರೇಯೋಭಿವೃದ್ಧಿಗಾಗಿ, ನಾಡಿನ ಎಲ್ಲ ಜನಾಂಗದ ಶಿಕ್ಷಣ, ಕ್ರೀಡಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಉದ್ದೇಶಕ್ಕಾಗಿ ಕೊಡಗು ಗೌಡ ಸಮಾಜ ಮಡಿಕೇರಿಗೆ ಮದೆನಾಡಿನಲ್ಲಿ 6 ಎಕರೆ ಜಾಗ ಮಂಜೂರಾಗಿದ್ದು, ಇದಕ್ಕಾಗಿ ಶ್ರಮಿಸಿದ ಶಾಸಕ ಹಾಗೂ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಲಾಗುವುದು’ ಎಂದು ಮಡಿಕೇರಿಯ ಕೊಡಗು ಗೌಡ ಸಮಾಜದ ನೂತನ ಅಧ್ಯಕ್ಷ ದಂಬೆಕೋಡಿ ಎಸ್.ಆನಂದ ತಿಳಿಸಿದರು.
‘10 ವರ್ಷಗಳ ಹಿಂದೆಯೇ ಈ ಭೂಮಿಗಾಗಿ ಮನವಿ ಮಾಡಲಾಗಿತ್ತು. ಸತತ ಪ್ರಯತ್ನ ನಡೆಸಲಾಗಿತ್ತು. ನಂತರ, ಪೊನ್ನಣ್ಣ ಅವರ ಸಹಕಾರ ಕೋರಲಾಗಿತ್ತು. ಪೊನ್ನಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಅವರ ಮನವೊಲಿಸಿ ಜಾಗ ಮಂಜೂರು ಮಾಡಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಶ್ಲಾಘಿಸಿದರು.
‘ಪೇರಿಯನ ಜಯಾನಂದ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಧುನಿಕ ಕಲ್ಯಾಣ ಮಂಟಪ ನಿರ್ಮಾಣಗೊಂಡಿದೆ. ಇದನ್ನು ಸಹ ಜಾತ್ಯಾತೀತವಾಗಿ ಬಳಲಾಗುತ್ತಿದೆ’ ಎಂದು ಹೇಳಿದರು.
‘ಈಚೆಗೆ 2026ರಿಂದ 28ರ ಅವಧಿಗೆ ಸಮಾಜದ ನೂತನ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯಿತು’ ಎಂದರು.
ಉಪಾಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ, ಕಾರ್ಯದರ್ಶಿ ಪೂಳಕಂಡ ಎಂ.ಸಂದೀಪ್, ನಿರ್ದೇಶಕರಾದ ಕೊಲ್ಯದ ಗಿರೀಶ್, ಹುದೇರಿ ರಾಜೇಂದ್ರ, ಮಾಜಿ ಅಧ್ಯಕ್ಷ ಪೇರಿಯನ ಜಯಾನಂದ ಭಾಗವಹಿಸಿದ್ದರು.
ಆಡಳಿತ ಮಂಡಳಿ:
ದಂಬೆಕೋಡಿ ಎಸ್.ಆನಂದ ಅಧ್ಯಕ್ಷರಾಗಿ, ಸೂರ್ತಲೆ ಆರ್.ಸೋಮಣ್ಣ ಉಪಾಧ್ಯಕ್ಷ, ಪೂಳಕಂಡ ಎಂ.ಸಂದೀಪ್ ಕಾರ್ಯದರ್ಶಿ, ಕಾಳೇರಮ್ಮನ ನಂದಕುಮಾರ್ ಖಜಾಂಚಿಯಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ಅಮೆ ಸೀತಾರಾಮ್, ಪೊನ್ನಚನ ಮಧುಸೂದನ್, ಕೊಲ್ಯದ ಗಿರೀಶ್, ಹುದೇರಿ ರಾಜೇಂದ್ರ, ಪೈಕೆರ ಮನೋಹರ, ಪೇರಾಯಾನ ಘನಶ್ಯಾಮ್, ತೋಟಂಬೈಲು ಅನಂತಕುಮಾರ್, ಮಂದ್ರಿರ ತೇಜಸ್, ಕೊಂಬನ ಪ್ರವೀಣ್, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಮೂಲೆಮಜಲು ಅಮಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.