ಗೋಣಿಕೊಪ್ಪಲು: ಜಿಲ್ಲೆಯ ಗಡಿಭಾಗದ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದ ಹೊಲದಲ್ಲಿ ಕಿಡಿಗೇಡಿಗಳು ಹಾಕಿದ್ದ ಉರುಳಿಗೆ ಸಿಕ್ಕಿಹಾಕಿಕೊಂಡು ನರಳುತ್ತಿದ್ದ ಗುಳ್ಳೆನರಿಯನ್ನು ಅರಣ್ಯ ಪರಿಸರ ವನ್ಯಜೀವಿ ಸಂರಕ್ಷಣಾ ಸಮಾಜ ದಕ್ಷಿಣ ಕರ್ನಾಟಕದ ಅಧ್ಯಕ್ಷ ಶಿವರಾಜ್ ಎಂಬವರು ರಕ್ಷಿಸಿದರು.
ಗ್ರಾಮದ ಹೊಲದ ಬದುವಿನಲ್ಲಿ ಅಪರಿಚಿತರು ಹಾಕಿದ್ದ ಉರುಳಿಗೆ ಗುಳ್ಳೆನರಿ ಸಿಕ್ಕಿಹಾಕಿಕೊಂಡಿತ್ತು. ಇದರಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡಿ ಹಿಂದಿನ ಕಾಲು ಮುರಿದು ಕೊಂಡಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು, ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಶಿವರಾಜು ಅವರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಶಿವರಾಜು ಹಾಗೂ ಸ್ನೇಹಿತರಾದ ವೀರೇಶ್, ಸಂತೋಷ್ ಅವರು ನರಿಗೆ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ವನ್ಯಜೀವಿ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದರು.
ಕಾಲು ಹಾಗೂ ಮುಖದ ಭಾಗಕ್ಕೆ ತೀವ್ರ ಗಾಯ ಮಾಡಿಕೊಂಡಿರುವ ಗುಳ್ಳೆನರಿ ಓಡಾಡಲು ಸಾಧ್ಯವಾಗದೆ ನಿತ್ರಾಣಗೊಂಡಿತ್ತು. ಇದೀಗ ಆರೋಗ್ಯ ಪರಿಶೀಲನೆಗಾಗಿ ಚಿಕಿತ್ಸೆ ನೀಡಿ ಪಿರಿಯಾಪಟ್ಟಣದ ವಿಭಾಗ ಅರಣ್ಯ ಕಚೇರಿಯ ಕೊಠಡಿಯಲ್ಲಿ ಕೂಡಿಹಾಕಲಾಗಿದೆ. ವೈದ್ಯಾಧಿಕಾರಿಗಳು ಆರೋಗ್ಯ ಪರಿಶೀಲಿಸುತ್ತಿದ್ದಾರೆ ಎಂದು ಶಿವರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.