ADVERTISEMENT

ಕೊಡವ ಕೌಟುಂಬಿಕ ಹಾಕಿ: ತುದಿಗಾಲ ಮೇಲೆರಿಸಲಿದೆ ಚಾಂಪಿಯನ್ಸ್ ಟ್ರೋಫಿ

ಕೊಡವ ಕೌಟುಂಬಿಕ ಹಾಕಿಯಲ್ಲಿ ಮೊದಲೆರಡು ಸ್ಥಾನ ಗಳಿಸಿದ ತಂಡಗಳ ನಡುವೆ ಪಂದ್ಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:20 IST
Last Updated 16 ಡಿಸೆಂಬರ್ 2025, 7:20 IST
<div class="paragraphs"><p>ಕೊಡವ ಕೌಟುಂಬಿಕ ಹಾಕಿ</p></div>

ಕೊಡವ ಕೌಟುಂಬಿಕ ಹಾಕಿ

   

ಮಡಿಕೇರಿ: ಇದುವರೆಗೂ ನಡೆದಿರುವ 25 ಕೊಡವ ಕೌಟುಂಬಿಕ ಹಾಕಿ ಟೂರ್ನಿಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ತಂಡಗಳ ನಡುವಿನ ಸೆಣಸಾಟಕ್ಕೆ ವೇದಿಕೆ ಸಿದ್ಧವಾಗಿದೆ. ಡಿ. 26ರಿಂದ 30ವರೆಗೆ ಮೂರ್ನಾಡು ಗ್ರಾಮದ ಬಾಚೆಟ್ಟೀರ ಲಾಲೂಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.

‘ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್ ಸಂಸ್ಥೆ, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆ ಸಹಕಾರದಿಂದ ನಡೆಯಲಿರುವ ಲೆವಿಷ್ಠಾ ಕೊಡವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪ್ರಶಸ್ತಿಗಾಗಿ 13 ತಂಡಗಳು ಸೆಣಸಲಿವೆ’ ಎಂದು ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ ಬೋಪಣ್ಣ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಈ ತಂಡಗಳನ್ನು ಒಟ್ಟು 4 ವಿಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ಪ್ರತಿಯೊಂದು ತಂಡವೂ ಲೀಗ್‌ ಮಾದರಿಯಲ್ಲಿ ಸೆಣಸಲಿವೆ. ಈ 4 ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ತಲಾ ಒಂದೊಂದು ತಂಡಗಳು ಸೆಮಿಫೈನಲ್ ತಲುಪಲಿವೆ. ಇವುಗಳಲ್ಲಿ ಗೆದ್ದ ತಂಡಗಳು ಫೈನಲ್‌ ಹಂತಕ್ಕೆ ಪ್ರವೇಶ ಪಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ಮೊದಲ ಬಹುಮಾನ ₹ 2 ಲಕ್ಷ, ದ್ವಿತೀಯ ಬಹುಮಾನ ₹ 1 ಲಕ್ಷ, ಸೆಮಿಫೈನಲ್‌ಗೆ ಅರ್ಹತೆ ಪಡೆದ ತಂಡಕ್ಕೆ ₹ 50 ಸಾವಿರ, ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ₹ 25 ಸಾವಿರ ಬಹುಮಾನ ನೀಡಲಾಗುವುದು’ ಎಂದರು.

ಅಕಾಡೆಮಿಯ ಗೌರವ ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ, ‘1997ರಲ್ಲಿ ಕರಡದಲ್ಲಿ ಆರಂಭವಾದ ಮೊದಲ ಹಾಕಿ ಹಬ್ಬದಲ್ಲಿ ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದವರನ್ನು ಹಾಗೂ ವೀಕ್ಷಕ ವಿವರಣೆಗಾರರನ್ನು ಗುರುತಿಸಿ ಉದ್ಘಾಟನಾ ಪಂದ್ಯದ ದಿನ ಸ್ಮರಣಿಕೆ ನೀಡಿ ಗೌರವಿಸಲಾಗುವುದು. 3 ಬಾರಿಯ ಒಲಂಪಿಯನ್ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ (ತವರು ಮನೆ ಗುಡ್ಡಂಡ) ಹಾಗೂ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಪಾಂಡಂಡ ಪುಷ್ಪಾ ಸುಬ್ಬಯ್ಯ (ತವರು ಮನೆ ಅಮ್ಮಾಟಂಡ) ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಹೇಳಿದರು.

ಇಲ್ಲಿಯವರೆಗೆ ಕೊಡವ ಹಾಕಿ ಕೌಟುಂಬಿಕ ಹಾಕಿ ಟೂರ್ನಿಯನ್ನು ಆಯೋಜಿಸಿರುವ ಎಲ್ಲ 25 ಕೊಡವ ಕುಟುಂಬದ ಅಧ್ಯಕ್ಷರು ಪಟ್ಟೆದಾರರ‌ನ್ನು ಅಂತಿಮ ಪ‍ಂದ್ಯಾವಳಿಯಲ್ಲಿ ಗೌರವಿಸಲಾಗುತ್ತದೆ ಎಂದರು.

ಅಕಾಡೆಮಿ ಉಪಾಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ‘ದಿವಂಗತ ಕುಟ್ಟಪ್ಪ ಕುಟ್ಟಣಿ  ಅವರು ಮೊದಲ ಬಾರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಜಮ್ಮಾಬಾಣೆ ಕಾಫಿ ತೋಟಗಳಿಗೆ ಸಾಲಸೌಲಭ್ಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಹಾಗೆಯೆ, ಕೊಡವ ಕೌಟುಂಬಿಕಗಳ ನಡುವಿನ ಹಾಕಿ ಪಂದ್ಯಾವಳಿಯನ್ನೂ ಅವರೇ ಆರಂಭಿಸಿದರು’ ಎಂದು ಶ್ಲಾಘಿಸಿದರು.

ಮುಖಂಡರಾದ ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್ ಪೂಣಚ್ಚ, ಮುಕ್ಕಾಟೀರ ಸೋಮಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.