ಮಡಿಕೇರಿ: ಕೊಡವ ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿತು.
ಸಮಗ್ರ ಮಾಹಿತಿಯನ್ನು ಒಳಗೊಂಡ ಮನವಿಯ ಜತೆಗೆ150 ಪುಟಗಳನ್ನು ಒಳಗೊಂಡಂತ ದಾಖಲೆಯನ್ನುಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಗೂ ಸದಸ್ಯರು ಸಲ್ಲಿಸಿದರು.
ಕೊಡವ ಭಾಷೆಯಲ್ಲಿರುವ ಕೊಡವ ಲಿಪಿ, ಕೊಡವ ವ್ಯಾಕರಣ, ಕೊಡವ ಶಬ್ಧಕೋಶ, ಸಂಶೋಧನೆ, ದಾಖಲೀಕರಣ, ಚಲನಚಿತ್ರ, ವಸ್ತುಸಂಗ್ರಹಾಲಯ, ಚಾನೆಲ್, ಪತ್ರಿಕೆಗಳು, ಧಾರಾವಾಹಿ, ಸಾಕ್ಷ್ಯಚಿತ್ರ, ಕೊಡವ ಭಾಷೆಯನ್ನು ಶಾಲೆಯಲ್ಲಿ, ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಇರುವ ಪಠ್ಯಕ್ರಮ, ಕೊಡವ ಅಧ್ಯಯನ ಪೀಠ ಹೀಗೆ ಸುಮಾರು 150 ಪುಟಗಳನ್ನು ಒಳಗೊಂಡಂತ ದಾಖಲೆಗಳು ಮನವಿ ಪತ್ರದ ಜತೆಗಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ಕುಮಾರ್, ಸಂಸದ ಪ್ರತಾಪ್ಸಿಂಹ, ಸೆಂಟ್ರಲ್ ಇನ್ಸ್ಟಿಟ್ಯೂಷನ್ ಆಫ್ ಲ್ಯಾಂಗ್ವೇಜ್ನ ನಿರ್ದೇಶಕರಿಗೂ,ಕೊಡಗಿನ ಎಲ್ಲಾ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ.
ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಸದಸ್ಯರಾದ ಮಾಚಿಮಾಡ ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಕುಡಿಯರ ಮುತ್ತಪ್ಪ, ನಾಗೇಶ್ ಕಾಲೂರು, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ ಮತ್ತು ಚಾಮೇರ ದಿನೇಶ್ ಬೆಳ್ಯಪ್ಪ ತಂಡದಲ್ಲಿ ಇದ್ದರು.
ಮನವಿ ಕುರಿತು ಉತ್ತಮ ಸ್ಪಂದನೆ ದೊರಕಿದೆ. 8ನೇ ಪರಿಚ್ಛೇದಕ್ಕೆ ಸೇರಿಸುವ ಆಶ್ವಾಸನೆಯನ್ನು ಎಲ್ಲರೂ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.