
ಮಡಿಕೇರಿ: ಕೊಡಗಿನಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಕೋಟ್ಯಂತರ ಅನುದಾನ ನೀಡಿದ್ದು, ಇದರ ಸದ್ಬಳಕೆಯಾಗಬೇಕು. ಸದ್ಯದಲ್ಲೇ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾ ತರಬೇತಿ ಕೇಂದ್ರಗಳು, ಮೈದಾನಗಳು ಹಾಗೂ ಕ್ರೀಡಾ ವಸತಿ ನಿಲಯಗಳು ಪೊನ್ನಂಪೇಟೆ, ವಿರಾಜಪೇಟೆ ಮತ್ತಿತರ ಕಡೆ ನಿರ್ಮಾಣವಾಗಲಿವೆ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ತಿಳಿಸಿದರು.
ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ ನಡೆಯಲಿರುವ 4ನೇ ವರ್ಷದ ಐಪಿಎಲ್ ಮಾದರಿಯ ಕೊಡವ ಪ್ರೀಮಿಯರ್ ಲೀಗ್ ಸೀಸನ್-4 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಉದಯೋನ್ಮುಖ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೊಡಗಿನ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ರಾಜ್ಯ ಸರ್ಕಾರ ಕೋಟ್ಯಾಂತರ ಅನುದಾನ ನೀಡುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಕ್ರಿಕೆಟ್ ಪಂದ್ಯಾವಳಿಯು ಕೊಡಗಿನಲ್ಲಿ ಸಹ ನಡೆಯುತ್ತಿರುವುದರಿಂದ ಪ್ರತಿಭಾವಂತ ಕ್ರಿಕೆಟ್ ಪಟುಗಳ ಬೆಳಕಿಗೆ ಬರಲು ಸಾಧ್ಯವಾಗುತ್ತಿದೆ ಎಂದರು.
ಸಿಗ್ಮ ನೆಟ್ವರ್ಕ್ಸ್ ವ್ಯವಸ್ಥಾಪಕ ನಿರ್ದೇಶಕ ಅವರೆಮಾದಂಡ ಶರಣ್ ಪೂಣಚ್ಚ, ಕೊಡವ ನಟಿ ಕಾಣತಂಡ ಬೀನ ಜಗದೀಶ್, ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ನ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ, ಉಪಾಧ್ಯಕ್ಷ ಚಕ್ಕೇರ ಕಾರ್ಯಪ್ಪ, ಕಾರ್ಯದರ್ಶಿ ಮುಕ್ಕಾಟಿರ ದೀಪಕ್, ನಿರ್ದೇಶಕರಾದ ರಂಜನ್ ಕಾರ್ಯಪ್ಪ, ಸಂಗಮ್ ಅಯ್ಯಪ್ಪ ಭಾಗವಹಿಸಿದ್ದರು.
12 ತಂಡಗಳ ಸೆಣಸಾಟ
ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಸೆಣಸಾಟ ನಡೆಸಲಿವೆ. ಮೊದಲ ದಿನವಾದ ಶುಕ್ರವವರ ಕೊಡವ ವಾರಿಯರ್ಸ್ ಮತ್ತು ಅಂಜಿಗೇರಿ ನಾಡ್ ತಂಡಗಳ ನಡುವಿನ ಪಂದ್ಯದಲ್ಲಿ 8 ವಿಕೆಟ್ಗಳ ಅಂತರದಿಂದ ಅಂಜಿಗೇರಿ ನಾಡ್ ತಂಡ ಗೆಲುವು ಸಾಧಿಸಿತು.
ಕೊಡವ ನೈಟ್ಸ್ ಮತ್ತು ಟೀಮ್ ಕೊಡವ ಟ್ರೈಬ್ ನಡುವೆ ನಡೆದ ಪಂದ್ಯದಲ್ಲಿ ಕೊಡವ ನೈಟ್ಸ್ ತಂಡ 18 ರನ್ಗಳಿಂದ ವಿಜಯ ಸಾಧಿಸಿತು.
ಮರೆನಾಡ್ ಯುನೈಟಡ್ ಮತ್ತು ಕೊಡವ ಬಂಬಂಗ ನಡುವಿನ ಪಂದ್ಯದಲ್ಲಿ 21 ರನ್ಗಳಿಂದ ಮರೆನಾಡ್ ಯುನೈಟಡ್ ತಂಡ ಗೆಲುವು ಸಾಧಿಸಿತು.
ಟೀಮ್ ಮಹಾಗುರು ಮತ್ತು ಎಂಟಿಬಿ ರಾಯಲ್ಸ್ ನಡುವಿನ ಪಂದ್ಯದಲ್ಲಿ ಎಂಟಿಬಿ ರಾಯಲ್ಸ್ ತಂಡ 6 ವಿಕೆಟ್ಗಳ ಜಯ ಸಾಧಿಸಿತು.
ಕೊಡವ ವಾರಿಯರ್ಸ್ ಮತ್ತು ಡಿಈ ಕೋಚ್ ನಡುವಿನ ಪಂದ್ಯದಲ್ಲಿ ಕೊಡವ ವಾರಿಯರ್ಸ್ 19 ರನ್ಗಳ ಜಯ ಸಾಧಿಸಿತು.
ಎಜೆ ಬಾಯ್ಸ್ ಮತ್ತು ಟೀಮ್ ಭಗವತಿ ನಡುವಿನ ಪಂದ್ಯದಲ್ಲಿ ಎಜೆ ಬಾಯ್ಸ್ 7 ವಿಕೆಟ್ಗಳ ಗೆಲುವು ಸಾಧಿಸಿತು.
ಅಂಜಿಗೇರಿ ನಾಡ್ ಮತ್ತು ಕೊಡವಾಮ್ಮೆ ಕಲ್ಟ್ಸ್ ನಡುವಿನ ಪಂದ್ಯದಲ್ಲಿ ಅಂಜಿಗೇರಿ ನಾಡ್ 8 ವಿಕೆಟ್ಗಳ ಜಯ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.