
ಕುಶಾಲನಗರ: ‘ಹಿಂದೂ ಧರ್ಮ, ಸಂಸ್ಕೃತಿ ಉಳಿಸಲು ಎಲ್ಲರೂ ಒಂದಾಗೋಣ, ಏಕತೆಯಲ್ಲಿ ನಮ್ಮ ಶಕ್ತಿ ಇದೆ ಒಟ್ಟಾಗಿ ನಿಲ್ಲೋಣ’ ಎಂದು ಹಿಂದೂ ಮುಖಂಡರೂ ಆದ ಪುತ್ತೂರಿನ ವಿವೇಕಾನಂದ ಕಾಲೇಜು ಅಧ್ಯಕ್ಷ ರವೀಂದ್ರ ಪುತ್ತೂರು ಸಲಹೆ ನೀಡಿದರು.
ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಅಂಗವಾಗಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
‘ಹಿಂದೂ ಸಂಸ್ಕೃತಿ, ಪರಂಪರೆ, ಕೌಟುಂಬಿಕ ಮೌಲ್ಯಗಳನ್ನು ಸಂರಕ್ಷಿಸುವ ಈ ಮೂಲಕ ಹಿಂದೂ ಸಮಾಜದ ಬಲವರ್ಧನೆಗೆ ಶ್ರಮಿಸಬೇಕೆಂದು ಎಂದರು.
‘ಇದು ಯಾವುದೇ ವ್ಯಕ್ತಿ, ಧರ್ಮದ, ರಾಜಕೀಯ ಪಕ್ಷದ ವಿರುದ್ಧ ಹಿಂದೂ ಸಂಗಮವಲ್ಲ. ಹಿಂದೂ ಸಮಾಜದ ಸಂಘಟನೆಗೆ ಗ್ರಾಮಗಳಲ್ಲಿ ಸಮಿತಿ ರಚನೆ ಮಾಡುವ ಮೂಲಕ ಜಾಗೃತಿ ಮೂಡುತ್ತಿರುವುದು ಹೆಮ್ಮೆಯ ಸಂಗತಿ. ಆದರೆ, ಹಿಂದೂಗಳೆಲ್ಲಾ ಒಂದೇ ಎಂಬ ಭಾವನೆಗಳೊಂದಿಗೆ ಜಾತಿ ಪದ್ಧತಿ ನಿರ್ಮೂಲನೆ ಮಾಡಬೇಕು. ಸ್ವದೇಶಿ ವಸ್ತುಗಳಿಗೆ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.
‘ಹಿಂದುತ್ವದ ಅರ್ಥ ಮಾಡಿಕೊಂಡವರು ಜಗತ್ತಿನಾದ್ಯಂತ ಬೇರೆ ಬೇರೆ ರಂಗಗಳಲ್ಲಿ ಬೆಳೆಯುತ್ತಿದ್ದಾರೆ. ಕೆಲವರು ವಿನಾಶಕ್ಕೆ ಸಂಚು ರೂಪಿಸುತ್ತಿದ್ದಾರೆ. ಹಿಂದೂ ಪದ ಕೇಳಿದರೆ ಮೈ ಪರಚಿಕೊಳ್ಳುವ ಕಾಲವೊಂದಿತ್ತು. ಸ್ವಾಮಿ ವಿವೇಕಾನಂದರ ಆದರ್ಶಗಳ ಪಾಲನೆ ಹಿಂದೂಗಳ ಹೆಮ್ಮೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ನವಚೈತನ್ಯ ತಂದು ಕೊಟ್ಟ ಮಹಾ ಚೇತನ’ ಎಂದು ರವೀಂದ್ರ ಬಣ್ಣಿಸಿದರು.
‘ಹಿಂದೂ ಸಮಾಜ ಯಾವತ್ತೂ ಯಾರ ಜೊತೆಯೂ ಯುದ್ಧಕ್ಕೆ ಇಳಿಯುವುದಿಲ್ಲ. ಜಗತ್ತಿನ ಕೆಲವು ರಾಷ್ಟ್ರಗಳಿಗೆ ಜನರನ್ನು ಕೊಲ್ಲುವುದೇ ಕೆಲಸವಾಗುತ್ತಿದೆ. ಭಾರತೀಯ ಸಹೋದರಿಯರ ಸಿಂಧೂರ ಅಳಿಸಿದ ಉಗ್ರರನ್ನು ನಮ್ಮ ಸೈನಿಕರು ಸದೆ ಬಡಿದದ್ದು ಇತಿಹಾಸ’ ಎಂದರು.
‘ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ‘4 ಸಾವಿರ ವರ್ಷಗಳ ಪುರಾತನವಾದ ಮಹಾನ್ ತ್ಯಾಗಿಗಳು, ಋಷಿಮುನಿಗಳು, ಮಹರ್ಷಿಗಳು ಇರುವ ಶ್ರೇಷ್ಠ ಸನಾತನ ಧರ್ಮದ ಸಂರಕ್ಷಣೆ ಅಗತ್ಯವಿದೆ’ ಎಂದು ಹೇಳಿದರು.
‘ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದ ದೇಶ ನಮ್ಮದು. ಪರಿಸರ ಸಂರಕ್ಷಣೆಗೂ ಹಿಂದೂ ಧರ್ಮದ ಧಾರ್ಮಿಕ ಪದ್ಧತಿಗಳಿಗೂ ಅವಿನಾಭಾವ ಸಂಬಂಧವಿದ್ದು, ಭಾರತೀಯ ಸಂಸ್ಕೃತಿಯನ್ನು ಇಂದಿನ ಯುವಕ ಯುವತಿಯರು ಆರಾಧಿಸುವ ಮೂಲಕ ಹಿರಿಯರ ಆಚರಣೆಗಳನ್ನು ಗೌರವಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವಾಗಬೇಕಿದ್ದು, ಇಂತಹ ಶ್ರೇಷ್ಠ ಧರ್ಮದ ತಳಹದಿಯನ್ನು ಗಟ್ಟಿ ಗೊಳಿಸಬೇಕಿದೆ. ಕೆಲವು ರಾಜಕಾರಣಿಗಳು ಮತ ಬ್ಯಾಂಕ್ಗೋಸ್ಕರ ಹಿಂದೂ ಧರ್ಮದ ವಿರುದ್ಧ ಟೀಕೆ ಮಾಡುತ್ತಿದ್ದು, ಇದು ಸಲ್ಲದು. ಹಾಗಾಗಿ ಹಿಂದೂ ಯುವ ಶಕ್ತಿ ಒಗ್ಗೂಡಿ’ ಎಂದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಸಂಯೋಜಕ ಜಿ.ಎಲ್.ನಾಗರಾಜು ಮಾತನಾಡಿ, ‘ಸಾವಿರಾರು ವರ್ಷಗಳಿಂದ ಹಿಂದೂ ರಾಷ್ಟ್ರ ಭಾರತ ದೇಶ ಕಳೆದುಕೊಂಡದ್ದನ್ನು ಮರಳಿ ಗಳಿಸಿ ಕೊಳ್ಳುವುದಕ್ಕೆ ಹಿಂದೂ ಸಂಗಮ ಅವಶ್ಯವಿದೆ. ಹಿಂದೂಗಳು ಇನ್ನಾದರೂ ಒಗ್ಗೂಡಿ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.
ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್, ವಿಶ್ವಜ್ಞಾನಿ ಡಾ.ಅಂಬೇಡ್ಕರ್ ಸಂಘದ ಅಧ್ಯಕ್ಷ ಲೋಕೇಶ್ ಪುಂಡಾರಿ,ಮುಖಂಡರಾದ ವಿ.ಎನ್.ವಸಂತ ಕುಮಾರ್, ಹರಪಳ್ಳಿರವೀಂದ್ರ ಭಾಗವಹಿಸಿದ್ದರು.
ಚರುಚಿ ಚಂದ್ರಶೇಖರ್ ದೇಶಭಕ್ತಿ ಗೀತೆ ಹಾಡಿದರು. ಎಂ.ಡಿ.ರಂಗಸ್ವಾಮಿ ಸ್ವಾಗತಿಸಿದರು. ಆಶಾ ಅಶೋಕ್ ನಿರೂಪಿಸಿದರು.