
ಕುಶಾಲನಗರ: ಕೊಡವ ಸಮಾಜದ ಅಭಿವೃದ್ಧಿಗೆ ₹20 ಲಕ್ಷ ಅನುದಾನವನ್ನು ಸರ್ಕಾರದಿಂದ ಒದಗಿಸಿಕೊಡುವುದಾಗಿ ಶಾಸಕ ಡಾ. ಮಂತರ ಗೌಡ ಭರವಸೆ ನೀಡಿದರು.
ಪಟ್ಟಣದ ಕೊಡವ ಸಮಾಜದ ವತಿಯಿಂದ ಸಮಾಜದ ಆವರಣದಲ್ಲಿ ಏರ್ಪಡಿಸಿದ್ದ ಪುತ್ತರಿ ಓತ್ತೊರ್ಮೆ ಕೂಟದಲ್ಲಿ ಅವರು ಮಾತನಾಡಿದರು.
‘ನಾನು ಮೊದಲ ಬಾರಿಗೆ ಪುತ್ತರಿ ಓತ್ತೊರ್ಮೆ ಕೂಟಕ್ಕೆ ಬಂದ್ದಿದ್ದೇನೆ. ನನಗೆ ಬಹಳ ಸಂತೋಷವಾಗಿದೆ. ಸಮಾಜದ ಬೆಳವಣಿಗೆಗೆ ಎಲ್ಲರೂ ಶ್ರಮ ವಹಿಸಬೇಕು, ಆಗ ಮಾತ್ರ ಸಮಾಜ ಬೆಳೆಯಲು ಸಾಧ್ಯ. ಇಂದಿನ ಮಕ್ಕಳಿಗೆ ಹಿರಿಯರು ತಮ್ಮ ಸಂಸ್ಕ್ರತಿ, ಆಚಾರ, ವಿಚಾರ, ಪರಂಪರೆಗಳನ್ನು ಹೇಳಿ ಕೊಡಬೇಕು’ ಎಂದು ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದ ಅದ್ಯಕ್ಷ ಕಾಳಿಮಡ ಎಂ. ಮೊಟಯ್ಯ ಮಾತನಾಡಿ, ಕೊಡವ ಜನಾಂಗದ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು. ಇಂದಿನ ಯುವ ಜನಾಂಗ ಆಧುನಿಕ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಹಾಗಾಗಿ, ಹಿರಿಯರು ತಮ್ಮ ಮಕ್ಕಳಿಗೆ ನಮ್ಮ ಆಚಾರ ವಿಚಾರಗಳನ್ನು ತಿಳಿಸಿಕೊಡಬೇಕು. ತಿಳಿಸುವ ಬರದಲ್ಲಿ ತಪ್ಪಾಗಬಾರದು. ಒಂದು ಸಾರಿ ತಪ್ಪಾದರೆ ಅದು ಪುನಾರವರ್ತನೆ ಆಗುತ್ತದೆ, ಅದಕ್ಕೆ ಅವಕಾಶ ಕೊಡಬಾರದು ಎಂದು ಸಲಹೆ ನೀಡಿದರು.
ಸಮಾಜದ ಅದ್ಯಕ್ಷ ವಾಂಚೀರ ಮನು ನಂಜುಂಡ ಅದ್ಯಕ್ಷತೆ ವಹಿಸಿ ಮಾತನಾಡಿ, ‘ನಮ್ಮ ಸಮಾಜದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಎಲ್ಲರ ಸಹಕಾರಬೇಕು, ನಮ್ಮಲ್ಲಿ ಒಗ್ಗಟ್ಟಿರಬೇಕು. ತಮ್ಮ ಆಸ್ತಿಯನ್ನು ಪರಭಾರೆ ಮಾಡಬೇಡಿ, ಮಕ್ಕಳಿಗೆ ಉತ್ತಮ ವಿದ್ಯೆ ಕೊಡಿಸಿ, ನಾಡಿನ ಉತ್ತಮ ಪ್ರಜೆಯಾಗಿ ರೂಪಿಸಿ’ ಎಂದು ಹೇಳಿದರು.
ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಾಧನೆ ಮಾಡಿದ ಸಮಾಜದ ಸದಸ್ಯರು ಮತ್ತು ಮಕ್ಕಳನ್ನು ಗೌರವಿಸಲಾಯಿತು. ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ಅಯಿಲಪಂಡ ಸಂಜು ಬೆಳ್ಳಿಯಪ್ಪ, ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.