ADVERTISEMENT

ನಾಪೋಕ್ಲು: ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 17 ಮೇ 2025, 13:07 IST
Last Updated 17 ಮೇ 2025, 13:07 IST
ನಾಪೋಕ್ಲು  ಸಮೀಪದ ಕಕ್ಕುಂದ ಕಾಡಿನ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾನ್ಯಾಸವನ್ನು ಶುಕ್ರವಾರ ನೆರವೇರಿಸಲಾಯಿತು
ನಾಪೋಕ್ಲು  ಸಮೀಪದ ಕಕ್ಕುಂದ ಕಾಡಿನ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾನ್ಯಾಸವನ್ನು ಶುಕ್ರವಾರ ನೆರವೇರಿಸಲಾಯಿತು   

ನಾಪೋಕ್ಲು: ಇಲ್ಲಿಗೆ ಸಮೀಪದ ಕಕ್ಕುಂದ ಕಾಡಿನ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾನ್ಯಾಸವನ್ನು ಶುಕ್ರವಾರ ನೆರವೇರಿಸಲಾಯಿತು. ಉಡುಪಿಯ ಸದಾಶಿವ ಉಪಾಧ್ಯಾಯ, ಕಾರ್ಕಳದ ರೋಹಿತ ಹಾಗೂ ಅರ್ಚಕ ಸುಧೀರ್ ಕುಮಾರ ಮೂಲ ನಕ್ಷತ್ರ ಸಂಕಷ್ಟ ಚತುರ್ಥಿ ದಿನದಂದು ಶಿಲಾನ್ಯಾಸ ನೆರವೇರಿಸಿದರು.

ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಜೀರ್ಣೋದ್ಧಾರ ಮಾಡಿ ದೇವರ ಅನುಗ್ರಹ ಪಡೆಯುವ ಉದ್ದೇಶದಿಂದ ಕಕ್ಕುಂದ ಕಾಡಿನ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮುಂದಾಗಿದೆ. ತೀರ್ಥರೂಪಿಣಿಯಾದ ಕಾವೇರಿ ನದಿಯು ಹರಿಯುವ ನಾಪೋಕ್ಲು ಸಮೀಪದ ಕಕ್ಕುಂದಕಾಡು ಎಂಬಲ್ಲಿ 25 ವರ್ಷಗಳ ಹಿಂದೆ ದೈವಿಕ ತಾಣದಲ್ಲಿ ಸತ್ಯನಾರಾಯಣ ಪೂಜೆಯೊಂದಿಗೆ ಆರಂಭವಾದ ಈ ಕ್ಷೇತ್ರ ತದನಂತರ ಸಂಕೀರ್ಣವಾದ ಸ್ಥಳದಲ್ಲಿ ವೆಂಕಟೇಶ್ವರ ದೇವರು, ಗಣಪತಿ ಹಾಗೂ ನವಗ್ರಹ ದೇವತೆಗಳ ಆರಾಧನೆ ನಡೆಯುತ್ತಿದೆ.

ಈ ದೇವಾಲಯದ ನಿರ್ಮಾಣ ಕಾಲದಲ್ಲಿ ತತ್ಕಾಲಕ್ಕೆ ಬೇಕಾದ ಕನಿಷ್ಠ ಅವಶ್ಯಕತೆ ಯೋಜನೆಯಲ್ಲಿ ಗರ್ಭಗುಡಿ, ತೀರ್ಥ ಮಂಟಪ, ಗಣಪತಿ ದೇವರಗುಡಿ ಇತ್ಯಾದಿಗಳನ್ನು ನಿರ್ವಹಿಸಿದ್ದು, ಇದು ದೇವಾಲಯಗಳ ವಾಸ್ತು ವಿನ್ಯಾಸಕ್ಕೆ ಹೊರತಾಗಿದೆ. ಅಂತೆಯೇ ವಾಸ್ತು ತಜ್ಞ ಉಡುಪಿ ಗುಂಡಿಬೈಲು ಸುಬ್ರಮಣ್ಯ ಅವಧಾನಿಗಳನ್ನು ಕರೆಸಿ, ವಾಸ್ತು ವಿಮರ್ಶೆ ನಡೆಸಲಾಯಿತು. ದೇವಾಲಯ ಶಿಥಿಲಾವಸ್ಥೆಯಲ್ಲಿ ಇರುವ ಕಾರಣದಿಂದ ದೇವಾಲಯವನ್ನು ಮೂಲದಿಂದಲೇ ಬದಲಾವಣೆ ಮಾಡಬೇಕೆಂದು ಅವರು ತಿಳಿಸಿದ್ದು, ದೇವಾಲಯದ ಜೀರ್ಣೋದ್ಧಾರ ಸಮಿತಿ ನೀಲಿನಕಾಶೆಯನ್ನು ಸಿದ್ಧಪಡಿಸಿ ದೇವಾಲಯದ ಸಮಗ್ರ ಜೀರ್ಣೋದ್ಧಾರಕ್ಕೆ ಸುಮಾರು ₹2 ಕೋಟಿ ವೆಚ್ಚ ತಗಬಹುದು ಎಂದು ಅಂದಾಜಿಸಿದೆ.

ADVERTISEMENT

ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ತಾಮ್ರದ ಹೊದಿಕೆ, ನೇವಿದ್ಯ ಕೋಣೆ, ಗಣಪತಿ ದೇವರ ಗುಡಿ, ನಾಗದೇವರಿಗೆ ಪೂಜಾ ಸ್ಥಳ, ನವಗ್ರಹ ದೇವತೆಗಳ ಸ್ಥಳ, ನೂತನ ಧ್ವಜಸ್ತಂಭ ಇತ್ಯಾದಿಗಳ ಯೋಜನೆಗಳೊಂದಿಗೆ ಪ್ರಾರಂಭಿಸುವ ಮಹತ್ಕಾರ್ಯಕ್ಕೆ ಜೀರ್ಣೋದ್ಧಾರ ಸಮಿತಿ ಸನ್ನದ್ಧವಾಗಿದೆ.
ಪೂರ್ವಭಾವಿಯಾಗಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜೀಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಪಿ ಗೋಪಾಲ, ಉಪಾಧ್ಯಕ್ಷ ಟಿ.ವಿ ಭವಾನಿ, ಗೌರವಾಧ್ಯಕ್ಷ ದೇವಿ ಪ್ರಸಾದ, ಕಾರ್ಯದರ್ಶಿ ದಿವ್ಯ ಮಂದಪ್ಪ, ಖಜಾಂಚಿ ಟಿ.ಕೆ.ಸೂರ್ಯಕುಮಾರ್, ದೇವಸ್ಥಾನ ಆಡಳಿತ ಮಂಡಳಿ ಕಾರ್ಯಧ್ಯಕ್ಷ ಟಿ.ಎನ್ ರಮೇಶ, ಕಾರ್ಯದರ್ಶಿ ಸುಜಿಕುಮಾರ್ ಟಿ.ಎ., ಸಮಿತಿ ಸದಸ್ಯರಾದ ಸೀನಾ, ಮಾಧವ, ಮಂದಪ್ಪ ,ಪ್ರಕಾಶ ಹಿರಿಯರಾದ ರಾಧಾಕೃಷ್ಣ, ಪುಟ್ಟಣ್ಣ ಹಾಗೂ ಊರಿನ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.