ಮಡಿಕೇರಿ: ನಗರದ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ವಿಜಯ್ ಅವರಿಗೆ ಕೊಲೆ ಬೆದರಿಕೆ ಬಂದಿದ್ದು ಪೊಲೀಸರಿಗೆ ದೂರು ನೀಡಲಾಗಿದೆ.
ಶುಕ್ರವಾರ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ವಿಚಾರಕ್ಕೆ ವಿದ್ಯಾರ್ಥಿನಿಯರು ಹಾಗೂ ಪ್ರಾಂಶುಪಾಲರ ನಡುವೆ ವಾಗ್ವಾದ ನಡೆದಿತ್ತು.
ವಿದ್ಯಾರ್ಥಿನಿಯರು ತರಗತಿಗೆ ಪ್ರವೇಶ ನೀಡುವಂತೆ ಪಟ್ಟು ಹಿಡಿದಾಗ, ‘ಇವರ ಮೇಲೆ ದೂರು ನೀಡುತ್ತೇನೆ, ಬಂಧಿಸಿ’ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದ್ದರು. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊಕ್ಕೆ ಮಹಮ್ಮದ್ ತೌಸಿಫ್ ಎಂಬಾತ ‘ನೀನು ಹೆಚ್ಚು ದಿನ ಬದುಕುವುದಿಲ್ಲ’ ಎಂದು ಬರೆದು ಅವಾಚ್ಯ ಶಬ್ಧಗಳಿಂದ ಬೆದರಿಕೆ ಒಡ್ಡಿದ್ದಾನೆ ಎಂದು ಪ್ರಾಂಶುಪಾಲರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ನ್ಯಾಯಾಲಯದ ಆದೇಶ ಪಾಲಿಸಬೇಕಿದೆ. ಅನಾವಶ್ಯಕ ಗೊಂದಲ ಉಂಟು ಮಾಡಬಾರದೆಂದು ಹೊರಗೆ ಕಳುಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೆ. ಆದೇಶವನ್ನು ಒಬ್ಬ ನೌಕರನಾಗಿ ಪಾಲಿಸಿದ್ದೇನೆ. ಅದಕ್ಕೆ ಕೊಲೆ ಬೆದರಿಕೆ ಹಾಕುತ್ತಾರೆ ಎಂದರೆ ಏನರ್ಥ? ಪ್ರಾಂಶುಪಾಲನಾಗಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಹಿತಾಸಕ್ತಿ ಕಾಪಾಡಬೇಕಾಗಿದೆ. ಬೆದರಿಕೆಗಳಿಗೆ ನಾನು ಕಿವಿಗೊಡುವುದಿಲ್ಲ’ ಎಂದು ವಿಜಯ್ ಅವರು ತಿಳಿಸಿದ್ಧಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.