ADVERTISEMENT

ಮಡಿಕೇರಿ ದಸರಾ: ಗೋಮಾತೆಯ ಮಹಿಮೆ ಸಾರಲಿರುವ ಮಂಟಪೋತ್ಸವ

ಕೆ.ಎಸ್.ಗಿರೀಶ್
Published 27 ಸೆಪ್ಟೆಂಬರ್ 2022, 10:15 IST
Last Updated 27 ಸೆಪ್ಟೆಂಬರ್ 2022, 10:15 IST
ದಂಡಿನ ಮಾರಿಯಮ್ಮ
ದಂಡಿನ ಮಾರಿಯಮ್ಮ   

ಮಡಿಕೇರಿ: ಈ ಬಾರಿ ದಸರಾ ದಶಮಂಟಪೋತ್ಸದಲ್ಲಿ ಗೋಮಾತೆಯ ಮಹಿಮೆಯನ್ನು ಸಾರುವಂತಹ ಮಂಟಪವೊಂದು ಸಿದ್ಧವಾಗುತ್ತಿದೆ. ಕಂಚಿ ಕಾಮಾಕ್ಷಮ್ಮ ದೇಗುಲ ಇಂತಹದ್ದೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿದೆ. ತನ್ನ 59ನೇ ವರ್ಷದ ಮಂಟಪೋತ್ಸವ ಪ್ರಯುಕ್ತ ಅದ್ದೂರಿಯಾಗಿಯೇ ಮಂಪಟವನ್ನು ಸಿದ್ಧಗೊಳಿಸಲಾಗುತ್ತಿದೆ.

ಗೋಮಾತೆಯ ಮಹಿಮೆಯನ್ನು 20 ನಿಮಿಷಗಳ ಕಾಲ ಸಮರ್ಥವಾಗಿ ಅಭಿವ್ಯಕ್ತಿಸುವಂತೆ ಈ ಮಂಟಪ ಅಣಿಗೊಳಿಸಲಾಗುತ್ತಿದೆ. ಕೇರಳದಿಂದ ಸ್ಟುಡಿಯೊ ವಿನ್ಯಾಸ, ಸೌಂಡ್‌ ಸಿಸ್ಟಂ ತರಲಾಗಿದೆ. ಗೋಮಾತೆಯ ಜತೆಗೆ ನಂದಿ, ಶಿವ ಮೊದಲಾದ 18 ಮೂರ್ತಿಗಳು ಇರಲಿವೆ ಎಂದು ಮುತ್ತುಮಾರಿಯಮ್ಮ ಬಾಲಕ ಮಂಡಳಿಯ ಅಧ್ಯಕ್ಷರಲ್ಲಿ ಒಬ್ಬರಾದ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ಮಂಡಳಿಗೆ ಬೌತಮ್‌ ಸುವರ್ಣ ಎಂಬುವವರೂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸ್ಥಳೀಯರಿಗೆ ಆದ್ಯತೆ ನೀಡಿದ ದಂಡಿನ ಮಾರಿಯಮ್ಮ ಸಮಿತಿ

ADVERTISEMENT

ಸತತ 92ನೇ ವರ್ಷಗಳಿಂದಲೂ ಮಂಟಪೋತ್ಸವದಲ್ಲಿ ಭಾಗಿಯಾಗುತ್ತಿರುವ ದಂಡಿನ ಮಾರಿಯಮ್ಮ ದೇಗುಲ ಸಮಿತಿಯು ಈ ಬಾರಿ ಮಂಟಪದ ವಿನ್ಯಾಸ, ರಚನೆ, ಬೆಳಕು ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡುವ ಮೂಲಕ ಗಮನ ಸೆಳೆದಿದೆ.

ಪಾರ್ವತಿಯಿಂದ ಭೂಲೋಕ ರಕ್ಷಣೆಗಾಗಿ ಶಾಖಾಂಬರಿ ರೂಪ ಧರಿಸುವುದು ಈ ಬಾರಿಯ ಕಥಾಹಂದರವಾಗಿದೆ. 22 ನಿಮಿಷಗಳ ಕಾಲ ದುರ್ಗಮ ರಾಕ್ಷಸನ ವಧೆ ಪ್ರಸಂಗವನ್ನು ನೋಡುಗರು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ಸಮಿತಿ ಸದಸ್ಯ ಪವನ್ ‘ಪ್ರಜಾವಾಣಿ’ಗೆ ತಿಳಿಸಿದರು. ಸದ್ಯ, ಸಮಿತಿಯ ಅಧ್ಯಕ್ಷರಾಗಿ ಅಮ್ಮನ್ ಅವರು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.