ADVERTISEMENT

ಕಾಯ್ದೆಯಲ್ಲಿಲ್ಲ ಸೋರಿಕೆಗೆ ಅವಕಾಶ: ವಿಬಿ–ಜಿ ರಾಮ್‌ ಜಿ ಸಮರ್ಥಿಸಿದ ಪ್ರತಾಪ್‌ಸಿಂಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:27 IST
Last Updated 9 ಜನವರಿ 2026, 5:27 IST
ಪ್ರತಾಪಸಿಂಹ
ಪ್ರತಾಪಸಿಂಹ   

ಮಡಿಕೇರಿ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆಯಲ್ಲಿ ಸೋರಿಕೆಗೆ ಆಸ್ಪದ ಇಲ್ಲ. ಮಾತ್ರವಲ್ಲ, ಇದರಲ್ಲಿ ಮಾನವ ದಿನಗಳನ್ನು ಕದಿಯುವುಕ್ಕೆ ಅವಕಾಶವೇ ಇಲ್ಲ ಎಂದು ಬಿಜೆಪಿ ಮುಖಂಡ ಪ್ರತಾಪ್‌ಸಿಂಹ ಪ್ರತಿಪಾದಿಸಿದರು.

ಯುಪಿಎ ಸರ್ಕಾರ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ನರೇಗಾ) ಕಾಯ್ದೆಯನ್ನು ರೂಪಿಸಿದ ಉದ್ದೇಶ ಒಳ್ಳೆಯದೇ ಇತ್ತು. ಆದರೆ, ಅದರ ಜಾರಿಯಲ್ಲಿ ತೊಡಕುಗಳು ಉಂಟಾದವು. ನಕಲಿ ಜಾಬ್ ಕಾರ್ಡ್‌ ಸೇರಿದಂತೆ ಅನೇಕ ಬಗೆಯ ಅಕ್ರಮಗಳಿಂದ ನಿಜವಾದ ಫಲಾನುಭವಿಗಳಿಗೆ ಯೋಜನೆ ಲಾಭ ದಕ್ಕದಂತಹ ಸ್ಥಿತಿ ಇತ್ತು. ಹಾಗಾಗಿ, ಕೇಂದ್ರ ಸರ್ಕಾರ ನಿಜವಾದ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರಕಿಸಲು ಕಾಯ್ದೆಯನ್ನು ಬದಲಿಸಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಖ್ಯವಾಗಿ, ಹಿಂದಿನ ಕಾಯ್ದೆಯ ಉದ್ದೇಶ ಉದ್ಯೋಗ ಸೃಜನೆಯಾಗಿತ್ತು. ಆದರೆ, ಈಗಿನ ಕಾಯ್ದೆಯಲ್ಲಿ ಉದ್ಯೋಗ ಸೃಜನೆಯ ಜೊತೆಗೆ ಸಂಪತ್ತಿನ ಸೃಷ್ಟಿಯನ್ನೂ ಪ್ರಧಾನ ಉದ್ದೇಶವಾಗಿ ಹೊಂದಿದೆ. ಇದರಿಂದ ಕೇವಲ ಕೆಲಸ ಮಾತ್ರ ದೊರಕದೇ ಸಮಾಜದಲ್ಲಿ ಸಂಪತ್ತೂ ಸೃಷ್ಟಿಯಾಗುತ್ತದೆ ಎಂದು ಅವರು ಯೋಜನೆಯ ಲಾಭಗಳನ್ನು ಕುರಿತು ಸವಿಸ್ತಾರವಾಗಿ ಮಾತನಾಡಿದರು.

ADVERTISEMENT

ಹೊಸ ಕಾಯ್ದೆಯಲ್ಲಿ ಮಾನವ ದಿನಗಳನ್ನು ಹೆಚ್ಚಿಸಲಾಗಿದೆ. ಮಾತ್ರವಲ್ಲ, ಕೆಲಸಕ್ಕೆ ಬರುವಾಗ ಹೋಗುವಾಗ ಫೋಟೊ ತೆಗೆಯುವಂತಹ ಅಕ್ರಮಕ್ಕೆ ಅವಕಾಶ ಇಲ್ಲದಂತಹ ವ್ಯವಸ್ಥೆ ರೂಪಿಸಲಾಗಿದೆ. ಹಾಗಾಗಿ, ಈ ಯೋಜನೆ ಹಿಂದಿನ ಯೋಜನೆಗಿಂತ ಹೆಚ್ಚು ಸೋರಿಕೆಯನ್ನು ತಡೆಗಟ್ಟುತ್ತದೆ ಎಂದರು.

ರಾಜ್ಯಸರ್ಕಾರದ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಹೆಚ್ಚಿಸಲು ರಾಜ್ಯಸರ್ಕಾರದ ಪಾಲನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ರಾಜ್ಯಸರ್ಕಾರಕ್ಕೆ ಆಯಾ ಪ್ರದೇಶಕ್ಕೆ ಅನುಗುಣವಾದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅಕ್ರಮಗಳನ್ನು ತಡೆಗಟ್ಟುವಂತಹ ಸದುದ್ದೇಶ ಹೊಂದಿರುವ ಈ ಕಾಯ್ದೆ ಕುರಿತು ದೇಶದ ಬೇರೆ ರಾಜ್ಯಗಳಿಂದ ಯಾವುದೇ ತಕರಾರರು ಕೇಳಿ ಬಂದಿಲ್ಲ. ಆದರೆ, ರಾಜ್ಯಸರ್ಕಾರ ಅನಗತ್ಯವಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಮುಖಂಡರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ರವಿ ಕುಶಾಲಪ್ಪ, ತಳೂರು ಕಿಶೋರ್‌ ಕುಮಾರ್ ಭಾಗವಹಿಸಿದ್ದರು.

ಯೋಜನೆಯ ಉದ್ದೇಶ ಕುರಿತು ಹೆಸರು
‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ನರೇಗಾ) ಕಾಯ್ದೆಯ ಹೆಸರನ್ನು ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಹೆಸರಾಗಿ ಬದಲಾಯಿಸಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರತಾಪಸಿಂಹ ‘ಬಿಜೆಪಿ ಯೋಜನೆಯ ಉದ್ದೇಶಕ್ಕೆ ಅನುಗುಣವಾಗಿ ಹೆಸರು ಇಡುತ್ತದೆಯೇ ಹೊರತು ವ್ಯಕ್ತಿಗತವಾಗಿ ಹೆಸರಿಡುವುದಿಲ್ಲ’ ಎಂದರು. ‘ಮಹಾತ್ಮ ಗಾಂಧೀಜಿ ಕುರಿತು ನಮಗೆ ಗೌರವ ಇದೆ. ನೋಟಿನಲ್ಲಿ ಅವರ ಚಿತ್ರ ಇದೆ. ಅವರಿಗೆ ಕೊಡಬೇಕಾಗಿರುವ ಎಲ್ಲ ಗೌರವಗಳನ್ನೂ ಕೊಟ್ಟಿದ್ದೇವೆ’ ಎಂದರು.
ನಾನು ಆಕಾಂಕ್ಷಿ ಎನ್ನುವುದು ಸುಶಿಕ್ಷಿತರಿಗೆ ಅರ್ಥವಾಗಿದೆ
‘ನಾನು ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎನ್ನುವುದು ಆ ಕ್ಷೇತ್ರದ ವಿದ್ಯಾವಂತರಿಗೆ ಅರಿವಾಗಿದೆ’ ಎಂದು ಬಿಜೆಪಿ ಮುಖಂಡ ಪ್ರತಾಪಸಿಂಹ ತಿಳಿಸಿದರು. ನಾಗೇಂದ್ರ ಅವರು ಚಾಮರಾಜ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಾಪಸಿಂಹ ‘ನಾನೊಬ್ಬ ಆಕಾಂಕ್ಷಿಯೇ ಹೊರತು ಇನ್ನೂ ಅಭ್ಯರ್ಥಿಯಾಗಿಲ್ಲ ಎಂಬುದು ವಿದ್ಯಾವಂತರಿಗೆಲ್ಲ ಅರ್ಥವಾಗುತ್ತದೆ’ ಎಂದು ಹೇಳಿದರು. ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸುಶಿಕ್ಷತರು ಹೆಚ್ಚಿದ್ದಾರೆ. ಹಾಗಾಗಿ ಅಲ್ಲಿ ಸ್ಪರ್ಧಿಸಲು ನಾನು ಉತ್ಸುಕನಾಗಿದ್ದೇನೆ. ಬಿಜೆಪಿಯ ಯಾರಿಗೆಲ್ಲ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಕೊಟ್ಟಿಲ್ಲವೋ ಅವರನ್ನೆಲ್ಲ ರಾಜ್ಯ ಕಾರಣದಲ್ಲಿ ತೊಡಗಿಸಿಕೊಂಡಿದೆ. ನಾನೂ ಸಹ ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿರುವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ದೃಷ್ಟಿಯಿಂದಲೇ ದೇವರಾಜ ಅರಸು ಅವರಿಗೆ ಸರಿಸಮ ಆಗಲಾರರು. ಈ ಕುರಿತು ಚರ್ಚೆಯೇ ಅನಗತ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರುram