ADVERTISEMENT

ಕೊಡಗಿನಲ್ಲಿ ಮಳೆ: ರಾತ್ರಿ ಬಿರುಸು, ಹಗಲು ಶಾಂತ

ನಿಲ್ಲದ ಮಳೆ, ತಪ್ಪದ ಆತಂಕ, ಕೂತಿ ಗ್ರಾಮದಲ್ಲಿ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 7:01 IST
Last Updated 1 ಜೂನ್ 2025, 7:01 IST
ಶುಕ್ರವಾರ ಸುರಿದ ಮಳೆಗೆ ವಿರಾಜಪೇಟೆ– ಮೂರ್ನಾಡು ಮಧ್ಯೆ 33 ಕೆ.ವಿ ಸಾಮರ್ಥ್ಯದ ವಿದ್ಯುತ್ ಗೋಪುರ ಹಾನಿಗೀಡಾಯಿತು. ಸುರಿಯುತ್ತಿದ್ದ ಮಳೆಯ ನಡುವೆ ಸೆಸ್ಕ್ ಸಿಬ್ಬಂದಿ ಸರಿಪಡಿಸಿದರು
ಶುಕ್ರವಾರ ಸುರಿದ ಮಳೆಗೆ ವಿರಾಜಪೇಟೆ– ಮೂರ್ನಾಡು ಮಧ್ಯೆ 33 ಕೆ.ವಿ ಸಾಮರ್ಥ್ಯದ ವಿದ್ಯುತ್ ಗೋಪುರ ಹಾನಿಗೀಡಾಯಿತು. ಸುರಿಯುತ್ತಿದ್ದ ಮಳೆಯ ನಡುವೆ ಸೆಸ್ಕ್ ಸಿಬ್ಬಂದಿ ಸರಿಪಡಿಸಿದರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆ ತನ್ನ ಪಥ ಬದಲಿಸಿದೆ. ರಾತ್ರಿ ವೇಳೆ ಸುರಿಯುತ್ತ ಹಗಲಿನಲ್ಲಿ ಶಾಂತಗೊಳ್ಳುತ್ತಿದೆ. ಗುರುವಾರ ರಾತ್ರಿ ಹಾಗೂ ಶುಕ್ರವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದರೆ, ಶುಕ್ರವಾರ ಮತ್ತು ಶನಿವಾರ ಹಗಲಿನಲ್ಲಿ ಮಳೆ ಇರಲಿಲ್ಲ. ಈ ಮಧ್ಯೆ ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ ಕಾಫಿ ತೋಟದಲ್ಲಿ ಭೂಕುಸಿತ ಉಂಟಾಗಿದೆ. ಅಲ್ಲಲ್ಲಿ ಮನೆ ಹಾನಿ ಮುಂದುವರಿದಿದೆ. ಹೀಗಾಗಿ, ಜನಸಾಮಾನ್ಯರು ಇನ್ನೂ ಮಳೆ ಆತಂಕದಿಂದ ಹೊರ ಬಂದಿಲ್ಲ.

ಶುಕ್ರವಾರ ರಾತ್ರಿ ಇದ್ದಕ್ಕಿದ್ದಂತೆ ಸುಳ್ಯಕ್ಕೆ ಹೊಂದಿಕೊಂಡ ಭಾಗಗಳಲ್ಲಿ ಭಾರಿ ಮಳೆ ಸುರಿಯಿತು. ಸಂಪಾಜೆ, ಪೆರಾಜೆ ವ್ಯಾಪ್ತಿಯಲ್ಲಿ ಈಚಿನ ದಿನಗಳಲ್ಲಿ ಕಾಣದಷ್ಟು ಮಳೆಯಾಯಿತು. ಈ ಮಳೆ ಅಲ್ಲಿನ ನಿವಾಸಿಗಳಲ್ಲಿ ಆತಂಕವನ್ನೂ ತಂದೊಡ್ಡಿತು. ಪೆರಾಜೆಯಲ್ಲಿ ಸುಮಾರು 17 ಸೆಂ.ಮೀನಷ್ಟು ಮಳೆಯಾದರೆ, ಸಂಪಾಜೆಯಲ್ಲಿ 11 ಸೆಂ.ಮೀನಷ್ಟು ಮಳೆಯಾಯಿತು. ಮಡಿಕೇರಿಯಲ್ಲಿ ಶುಕ್ರವಾರ ರಾತ್ರಿ ಇಡೀ ಸುರಿದ ಮಳೆ ಪ್ರಮಾಣ 17 ಸೆಂ.ಮೀ ದಾಟಿತ್ತು.

ಈ ಬಗೆಯ ಮಳೆ ವಿನ್ಯಾಸವು ಅಚ್ಚರಿಗೆ ಕಾರಣವಾಗಿದೆ. ಇದರಿಂದ ರಾತ್ರಿ ವೇಳೆ ಅಲ್ಲಲ್ಲಿ ಹಾನಿ ಉಂಟಾಗುತ್ತಿದೆ. ವಿರಾಜಪೇಟೆ– ಮೂರ್ನಾಡು ಮಧ್ಯೆ 33 ಕೆ.ವಿ ಸಾಮರ್ಥ್ಯದ ವಿದ್ಯುತ್ ಗೋಪುರ ಹಾನಿಗೀಡಾಯಿತು. ಸುರಿಯುತ್ತಿದ್ದ ಮಳೆಯ ನಡುವೆ ಸೆಸ್ಕ್ ಸಿಬ್ಬಂದಿ ಸರಿಪಡಿಸಿದರು. ಭಾಗಮಂಡಲ ಹೋಬಳಿ ಕಡಿಯತ್ತೂರು ಗ್ರಾಮದ ತೊರೇರ ತಂಗಮ್ಮ ಅವರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಯಿತು.

ADVERTISEMENT

ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ಅವರು ಸೋಮವಾರಪೇಟೆ ಹೋಬಳಿಯ ಕುಂಬೂರು, ಜಂಬೂರು ಹಾಗೂ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಂತಳ್ಳಿ ಹೋಬಳಿ ಕೂತಿ ಗ್ರಾಮದ ರಸ್ತೆಯ ಪಕ್ಕದ ತೋಟದಲ್ಲಿ ಬರೆ ಕುಸಿದಿರುವುದನ್ನು ಸ್ಥಳ ಪರಿಶೀಲಿಸಿದರು. ಕೂತಿ ಗ್ರಾಮದಲ್ಲಿ ಭೂಕುಸಿತವಾದ ಸ್ಥಳವನ್ನು ಶಾಸಕ ಡಾ.ಮಂತರ್‌ಗೌಡ ಪರಿಶೀಲಿಸಿದರು.

ಈ ನಡುವೆ ಮಡಿಕೇರಿಯಲ್ಲಿ ಶನಿವಾರ ಕೊಂಚ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಬಿಸಿಲಿನಿಂದ ಮಳೆ ದೂರವಾಗುವ ನಿರೀಕ್ಷೆ ಮೂಡಿಸಿದೆ.

ಭಾಗಮಂಡಲ ಹೋಬಳಿ ಕಡಿಯತ್ತೂರು ಗ್ರಾಮದ ತೊರೇರ ತಂಗಮ್ಮ ಅವರ ಕೊಟ್ಟಿಗೆ ಮೇಲೆ ಮರ ಬಿದ್ದು ಕೊಟ್ಟಿಗೆ ಹಾನಿಯಾಗಿದೆ

ಮಳೆ ಹಾನಿ ಪ್ರದೇಶಗಳಿಗೆ ಎ.ಎಸ್.ಪೊನ್ನಣ್ಣ ಭೇಟಿ

ಇಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಜೂನ್ 1ರಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಲಿದ್ದಾರೆ. ಅವರು ಬೆಳಿಗ್ಗೆ 10.30ಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಲಿದ್ದಾರೆ. ನಂತರ ಬೆಳಿಗ್ಗೆ 11.30ಕ್ಕೆ ಆರ್ಜಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಅನ್ವರುಲ್ ಉದಾ ಶಾಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮೈತಾಡಿ ಗ್ರಾಮ ವ್ಯಾಪ್ತಿಯಲ್ಲಿ ಮನೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಸಿದ್ದಾಪುರ ರಸ್ತೆ ವೀಕ್ಷಿಸಲಿದ್ದಾರೆ. ಹಾಗೆಯೇ ಮಾಲ್ದಾರೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.