ಮಡಿಕೇರಿ: ನಗರದ ಸ್ಟೋನ್ ಹೀಲ್ ಬಳಿ ಇರುವ ಕಸ ವಿಲೇವಾರಿ ಘಟಕ್ಕೆ ಸಂಸದರಾದ ಪ್ರತಾಪ ಸಿಂಹ, ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಹಸಿ ಕಸ, ಒಣ ಕಸದಿಂದ ಸಾವಯುವ ಗೊಬ್ಬರ ಮಾಡುವ ಘಟಕವನ್ನು ಪರಿಶೀಲಿಸಿದ ನಂತರ ಕಸ ವಿಲೇವಾರಿ ಘಟಕ ಬೆಟ್ಟದಲ್ಲಿದ್ದು ಮಳೆಗಾಲದಲ್ಲಿ ಕಸದಿಂದ ನೀರು ಕಲುಷಿತಗೊಳ್ಳುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಅಳವಡಿಸಿಕೊಂಡಿರುವ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಸರಕ್ಕೆ ಮತ್ತು ಅಂತರ್ಜಲ ಯಾವುದೇ ರೀತಿಯಾಗಿ ಮಾಲಿನ್ಯ ಉಂಟಾಗದಂತಹ ಕಸ ವಿಲೇವಾರಿ ಘಟಕ ನಿರ್ವಹಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಆದ್ದರಿಂದ, ಈ ಕುರಿತು ಮೈಸೂರಿನಿಂದ ತಜ್ಞರನ್ನು ಕರೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿದರು.
ನಗರದಿಂದ ಸಂಗ್ರಹವಾಗುತ್ತಿರುವ ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ಸಾವಯುವ ಗೊಬ್ಬರವನ್ನಾಗಿ ಮಾಡುವಂತೆ ಕ್ರಮ ಕೈಗೊಳ್ಳುವಂತೆ ನಗರ ಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ನಗರದಿಂದ ಸಂಗ್ರಹಿಸಲಾಗುತ್ತಿರುವ ಕಸದ ಮಾಹಿತಿಯನ್ನು ಪಡೆದು, ಕಸವನ್ನು ಬೇರ್ಪಡಿಸಿ ಸಾವಯುವ ಗೊಬ್ಬರ ತಯಾರಿಯ ಘಟಕದ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಪ್ರತಿ ದಿನ 50 ಟನ್ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.
ಸುನೀಲ್ ಸುಬ್ರಮಣಿ ಮಾತನಾಡಿ ಘನ ತ್ಯಾಜ್ಯ ವಿಲೇವಾರಿ ಸಂಬಂಧಿಸಿದಂತೆ ಇಲ್ಲಿನ ಸಮಸ್ಯೆಗಳ ಬಗ್ಗೆ ನಿಖರ ಮಾಹಿತಿ ನೀಡುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೌರಾಯುಕ್ತ ಎಂ.ಎಲ್.ರಮೇಶ್, ಆರೋಗ್ಯಾಧಿಕಾರಿ ನಾಚಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.