ಕುಶಾಲನಗರ: ಪಟ್ಟಣದ ಮುತ್ತೂಟ್ ಫೈನಾನ್ಸ್ ವತಿಯಿಂದ ‘ವಿವಾಹ ಸಮ್ಮಾನಂ’ ಯೋಜನೆಯಡಿ ಬಡ ಯುವತಿಯ ವಿವಾಹಕ್ಕೆ ₹1 ಲಕ್ಷ ಆರ್ಥಿಕ ನೆರವು ನೀಡಲಾಯಿತು.
ಸಂಸ್ಥೆಯ ಸಾಮಾಜಿಕ ಸೇವಾ ನಿಧಿಯಿಂದ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮದಲಾಪುರದ ಹರಿಣಿ ಎಂಬುವರ ಪುತ್ರಿಎಂ.ಆರ್. ವಿದ್ಯಾ ಅವರ ವಿವಾಹಕ್ಕೆ ನೆರವಾಗುವ ನಿಟ್ಟಿನಲ್ಲಿ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಲಿಬಿನ್ ಕೆ. ಆಂಟೋನಿ ₹1 ಲಕ್ಷ ಮೊತ್ತದ ಚೆಕ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ‘ಬಡ ವಿದ್ಯಾರ್ಥಿಗಳ ಶಿಕ್ಷಣ, ಕಡು ಬಡವರ ಅನಾರೋಗ್ಯ ಸಮಸ್ಯೆಗಳಿಗೆ ಸಂಸ್ಥೆ ಮೂಲಕ ಅಗತ್ಯ ನೆರವು ಒದಗಿಸಲಾಗುತ್ತಿದೆ. ಈ ಬಾರಿ ಕಡುಬಡ ಹೆಣ್ಣು ಮಗಳ ಮದುವೆಗೆ ಆರ್ಥಿಕ ನೆರವು ನೀಡಲಾಗಿದೆ. ಅಗತ್ಯ ಸಹಕಾರ ಕೋರಿ ಅರ್ಜಿಗಳು ಬಂದಲ್ಲಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ನೆರವು ನೀಡಲಾಗುವುದು’ ಎಂದು ತಿಳಿಸಿದರು.
ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿದರು. ಉಪಾಧ್ಯಕ್ಷ ಗಿರೀಶ್, ಮುತ್ತೂಟ್ ಸಂಸ್ಥೆಯ ಜೋಹನ್ ಪಿಂಟೋ, ರಕ್ಷಿತ್ ಕೆ. ಅಪ್ಪಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.