ಕುಶಾಲನಗರ: ಪ್ರಸಿದ್ಧ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಿಂದ 4 ಸಾಕಾನೆಗಳು ಮೈಸೂರಿನತ್ತ ಬುಧವಾರ ಸಂಜೆ ಪ್ರಯಾಣ ಆರಂಭಿಸಿದವು. ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವತಿಯಿಂದ ಗಜ ಪಯಣಕ್ಕೆ ಚಾಲನೆ ನೀಡಲಾಯಿತು.
ಕಾವೇರಿ (43 ವರ್ಷ), ವಿಜಯಾ (61 ವರ್ಷ), ವಿಕ್ರಂ (57), ಗೋಪಿ (39) ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿವೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಮಾವುತರು ಬುಧವಾರ ಸಂಜೆ ಪಾಲ್ಗೊಂಡಿದ್ದರು.
ವಿವಿಧ ಹೂವುಗಳಿಂದ ಸಿಂಗರಿಸಿದ ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ದಸರಾ ಹಬ್ಬದ ಸಂದರ್ಭ ಯಾವುದೇ ಅನಾಹುತ ನಡೆಯದಂತೆ, ಆನೆಗಳು ಹಾಗೂ ಮಾವುತರಿಗೆ ಯಾವುದೇ ತೊಂದರೆ ಆಗದಂತೆ ಮತ್ತು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಹಾಗೂ ಸಿಬ್ಬಂದಿಗಳು ಆನೆಗಳಿಗೆ ಕಬ್ಬು, ಬೆಲ್ಲ, ಹಣ್ಣುಗಳನ್ನು ತಿನ್ನಿಸಿ ಚಾಲನೆ ನೀಡಿದರು.
ಇದೇ ವೇಳೆ ಅನನ್ಯ ಕುಮಾರ್ ಮಾತನಾಡಿ, ದುಬಾರೆ ಸಾಕಾನೆ ಶಿಬಿರದಿಂದ ದಸರಾ ಮಹೋತ್ಸವಕ್ಕೆ ನಾಲ್ಕು ಆನೆಗಳನ್ನು ಮತ್ತು ಅದರ ಮಾವುತರು ಹಾಗೂ ಕಾವಾಡಿಗರು, ಅವರ ಕುಟುಂಬದ ಸದಸ್ಯರು ಕೂಡ ಮೈಸೂರಿಗೆ ತೆರಳುತ್ತಿದ್ದಾರೆ ಎಂದರು.
ಮಾವುತರಾದ ಜೆ.ಕೆ.ಡೋಬಿ, ಜೆ.ಕೆ.ಭೋಜಪ್ಪ, ಜೆ.ಕೆ.ಮುತ್ತು, ಎಸ್.ನಾಗರಾಜು, ಕಾವಾಡಿಗಾರಾದ ರಂಜಾನ್, ಭರತ್, ಹೇಮಂತ್, ಶಿವು ಹಾಗೂ ಅವರ ಕುಟುಂಬ ವರ್ಗ ಕೂಡ ಆನೆಗಳ ಜೊತೆ ಪ್ರಯಾಣ ಬೆಳೆಸಿತು.
ರಾತ್ರಿ ಎಲ್ಲ ಆನೆಗಳನ್ನು ಲಾರಿಗೆ ಹತ್ತಿಸಿ ಕಳುಹಿಸಿ ಕೊಡಲಾಯಿತು.
ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ರಂಜನ್, ಮಹಾದೇವ ನಾಯಕ್, ಅನಿಲ್ ಡಿಸೋಜ, ಸುಬ್ರಾಯ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.