ನಾಪೋಕ್ಲು: ಕೊಡವ ಜನಾಂಗದ ಏಳಿಗೆ ಹಾಗೂ ಲೋಕ ಕಲ್ಯಾಣಕ್ಕಾಗಿ ಭಾಗಮಂಡಲದ ಶ್ರೀ ಕಾವೇರಮ್ಮ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣ ಚಾರಿಟೇಬಲ್ ಟ್ರಸ್ಟ್ ಜಾಗದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಬುಧವಾರ ನೆರವೇರಿದವು.
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಎದುರಿನ ಬಯಲು ಪ್ರದೇಶದಲ್ಲಿ 2014ರಲ್ಲಿ ಯಜು ಸಂಹಿತ ಯಾಗ, ಕೃಷ್ಣ ಯಜುರ್ವೇದ ಚಂಡಿಕಾ ಹೋಮ ಮತ್ತು ಇತರ ಪೂಜಾ ಕಾರ್ಯಗಳನ್ನು ನಡೆಸಲಾಗಿತ್ತು. ನಂತರ ಪ್ರತಿ ವರ್ಷ ಜನವರಿಯಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಅದ್ಧೂರಿಯಿಂದ ಕಾರ್ಯಕ್ರಮವನ್ನು ನಡೆಸಲಾಯಿತು. ಬೆಳಿಗ್ಗೆ ಗಣಪತಿ ಹೋಮ ಸತ್ಯನಾರಾಯಣ ಪೂಜೆ, ಚಂಡಿಕಾ ಹೋಮ ಹಾಗೂ ಶತರುದ್ರಾಭಿಷೇಕ ಪಠಣಗಳು ಜರುಗಿದವು. ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀ ಕಾವೇರಮ್ಮ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಬಿ. ದೇವಯ್ಯ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.