ನಾಪೋಕ್ಲು: ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆಗಳನ್ನು ತುಳಿದು ನಾಶಪಡಿಸಿದೆ.
ಎಡಪಾಲ ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಜನರು ಭಯಭೀತರಾಗಿದ್ದಾರೆ. ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ತರಲು ಭಯದ ವಾತಾವರಣ ಸೃಷ್ಟಿಯಾಗಿದ್ದು ಕೂಡಲೇ ಕಾಡಾನೆಗಳು ತೋಟಗಳಿಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಬೆಳೆಗಾರರಾದ ಪಾಲಚಂಡ ಪೂವಿ, ಸಂಶುದ್ದೀನ್ ಮತ್ತಿತರರು ಒತ್ತಾಯಿಸಿದರು.
ಸಮೀಪದ ಬೆಟ್ಟಗೇರಿ ಗ್ರಾಮದ ಕಾಫಿ ಬೆಳೆಗಾರ ಚೌರಿರ ಕುಮಾರ್ ಸೇರಿದಂತೆ ಗ್ರಾಮದ ಹಲವು ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು ಬಾಳೆ ಕಾಫಿ ಅಡಿಕೆ ತೆಂಗಿನ ಗಿಡಗಳನ್ನು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ. ಸುಮಾರು ₹1.5 ಲಕ್ಷ ಮೌಲ್ಯದ ಬಾಳೆ ಹಾಗೂ ಕಾಫಿ ಪಸಲು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಸಮೀಪದ ಯವಕಪಾಡಿ ಗ್ರಾಮದ ಕಬ್ಬಿನಕಾಡಿನಲ್ಲಿ ಕಾಡಾನೆಗಳು ಮಝಂಡ್ರ ಸುರೇಶ್ ಮತ್ತು ಸರು ಅವರ ಮನೆಯಂಗಳಕ್ಕೆ ಬಂದು ಬಾಳೆಗಿಡ ಮತ್ತು ಕಾಫಿಗಿಡಗಳನ್ನು ನಾಶಪಡಿಸಿವೆ. ಕಾಡಾನೆಗಳು ಕಾಫಿ ತೋಟಕ್ಕೆ ಲಗ್ಗೆಇಟ್ಟಿವೆ. ಇನ್ನೀಗ ಭತ್ತದ ಗದ್ದೆಗಳಿಗೂ ಲಗ್ಗೆಯಿಡಲಿವೆ. ಹತ್ತಾರು ಕಾರಣಗಳಿಂದ ಭತ್ತದ ಕೃಷಿಯಿಂದ ವಿಮುಖರಾಗುತ್ತಿರುವ ರೈತರಿಗೆ ಕಾಡಾನೆಗಳ ಉಪಟಳ ನುಂಗಲಾರದ ತುತ್ತಾಗಿದೆ. ಇದೀಗ ಭತ್ತದ ನಾಟಿ ಮುಗಿದ ಅವಧಿಯಾಗಿದ್ದು ಪೈರುಗಳು ನಾಶವಾದರೆ ರೈತರು ಭತ್ತದ ಕೃಷಿಯನ್ನೇ ಕೈಬಿಡುವ ಪರಿಸ್ಥಿತಿ ಎದುರಾಗಲಿದೆ ಎಂದು ಮಝಂಡ್ರ ಸುರೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.