ನಾಪೋಕ್ಲು: ಅರಬ್ ಸಂಸ್ಥಾನದಲ್ಲಿ ಕಾರ್ಯಾಚರಿಸುವ ಕೊಡಗು ಸುನ್ನೀ ವೆಲ್ಫೇರ್ ಘಟಕವು ಗುರುವಾರ 4 ಜೋಡಿಗಳ ವಿವಾಹಕ್ಕೆ ನೆರವಾಗಿದ್ದು, ಸಂಘಟನೆಯಿಂದ ಇಂಥ ಇನ್ನೂ ಹಲವು ಸಾಮಾಜಿಕ ಉಪಯುಕ್ತ ಕಾರ್ಯಗಳು ನಡೆಯಲಿ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಹೇಳಿದರು.
ಚೆರಿಯಪರಂಬು ಶಾದಿಮಹಲ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹ ದಲ್ಲಿ ಅವರು ಮಾತನಾಡಿದರು. ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ವಕ್ಫ್ ಮಂಡಳಿ ಅಭಿವೃದ್ಧಿಯಾದರೆ ಮುಸ್ಲಿಂ ಸಮುದಾಯದ ಅಭಿವೃದ್ಧಿ ಸಾಧ್ಯ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ,ಧಾರ್ಮಿಕವಾಗಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಕೊಡಗು ಸುನ್ನೀ ವೆಲ್ಫೇರ್ ಸಮಿತಿ ಕಾರ್ಯ ಶ್ಲಾಘನೀಯ ಎಂದರು.
ಸಮಿತಿಯು ಕಳೆದ ಮೂರು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಂಡು ಬರುತ್ತಿದ್ದು ಈ ಬಾರಿ ಪಡಿಯಾಣಿ, ಎಮ್ಮೆಮಾಡು, ನಾಪೋಕ್ಲು , ದೇವಣಗೇರಿಯ ಬಡ ವಧು-ವರರಿಗೆ ಬೇಕಾದ ಮಾಂಗಲ್ಯ ಚಿನ್ನಾಭರಣ, ವಸ್ತ್ರ, ವಾಚ್ಗಳನ್ನು ನೀಡಿತ್ತು. ಮೌಲಾನ ಶಾಫಿ ಸಅದಿ ಅವರನ್ನು ಸನ್ಮಾನಿಸಲಾಯಿತು.
ಸಯ್ಯಿದ್ ಮುಸ್ತಫಾ ಪೂಕೊಯ ತಂಙಳ್, ಕೊಡಗು ಜಿಲ್ಲಾ ನಾಇಬ್ ಖಾಝಿ ಶಾದುಲಿ ಫೈಝಿ, ಕೂರ್ಗ್ ಜಂಇಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ನಿಖಾಹ್ ಮುಂದಾಳತ್ವವನ್ನು ವಹಿಸಿದ್ದರು. ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಾಫಿ ಸಅದಿ, ಕೂರ್ಗ್ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ವಿರಾಜಪೇಟೆ, ಎಸ್ ವೈ ಎಸ್ ಅಧ್ಯಕ್ಷ ಹಫೀಲ್ ಸಅದಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಮುಹಮ್ಮದ್ ಹಾಜಿ, ನಾಪೋಕ್ಲು ಜಮಾಅತ್ ಅಧ್ಯಕ್ಷ ಸಲೀಂ ಹ್ಯಾರಿಸ್, ನಿಯಾಜ್ ಸುಂಟಿಕೊಪ್ಪ, ಖಾಸಿಂ, ಅಬ್ದುಲ್ ರಹಮಾನ್, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಹಂಝ ಕೊಟ್ಟಮುಡಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮನ್ಸೂರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.