ADVERTISEMENT

ಕೊಡಗು: ಗೋಣಿಕೊಪ್ಪಲಿನಲ್ಲಿ ನವರಾತ್ರಿ ಉತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 8:37 IST
Last Updated 22 ಸೆಪ್ಟೆಂಬರ್ 2025, 8:37 IST
   

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ ಸೋಮವಾರ ನವರಾತ್ರಿ ಉತ್ಸವ ಆರಂಭಗೊಂಡಿತು.

ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ  ಭಾಗವಹಿಸಿದರು‌.   ಬಳಿಕ ಮಾತನಾಡಿದ ಅವರು, ನಾಡಿನ ಎಲ್ಲಾ ಜನರು ಶ್ರದ್ಧಾಭಕ್ತಿಯಿಂದ ಆಚರಿಸುವ ಈ ನವರಾತ್ರಿ ಉತ್ಸವದಂದು, ನಾಡಿನ ಸಮಸ್ತ ಜನರಿಗೆ ಆ ತಾಯಿಯ ಕೃಪಾಶೀರ್ವಾದ ದೊರೆಯಲಿ ಎಂದು ಹೇಳಿದರು.  ನಮ್ಮ ಪುರಾತನ ಆಚರಣೆ ಹಾಗೂ ನಂಬಿಕೆಯಂತೆ, ಈ ನವರಾತ್ರಿಯ ಸಂದರ್ಭವು ಎಲ್ಲಾ ದುಷ್ಟ ಶಕ್ತಿಗಳನ್ನು ಹೋಗಲಾಡಿಸುವ ದೇವಿಯ ಅವತಾರವನ್ನು ಪೂಜಿಸುವ ದಿನವಾಗಿದೆ. ಆ ಶಕ್ತಿ ಮಾತೆಯು ನಾಡಿನ ಎಲ್ಲರಿಗೂ ಒಳಿತನ್ನು ಮಾಡಿ ದುಷ್ಟತನವನ್ನು ದೂರ ಮಾಡಿ ಸಮಾಜವು ಉತ್ತಮ ಬಾಂಧವ್ಯದೊಂದಿಗೆ ಮುಂದುವರೆಯುವಂತೆ ಹರಸಲಿ ಎಂದು ಹೇಳಿದರು.

ಈ ವೇಳೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ್ ಮಾಚಯ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.