ಬಾಕ್ಸ್ ಹಾಗೂ ಮುಖ್ಯಾಂಶಗಳಿವೆ...
********************
ಮಡಿಕೇರಿ:ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ‘ಹೈಟೆಕ್ ತರಕಾರಿ ಮಾರುಕಟ್ಟೆ’ ಉದ್ಘಾಟನೆಗೊಂಡು ಹಲವು ತಿಂಗಳು ಕಳೆದರೂ ವ್ಯಾಪಾರಿಗಳಿಗೆ ಮಾತ್ರ ಅದು ಅನುಕೂಲವಾಗಿಲ್ಲ. ಬೃಹತ್ ಕಟ್ಟಡವು ಎದುರಿಗಿದ್ದರೂ ಬೀದಿ ಬದಿಯಲ್ಲಿಯೇ ವ್ಯಾಪಾರ ನಡೆಸುವ ಸ್ಥಿತಿಯಿದೆ.
ಆರಂಭದಲ್ಲಿ ಬಿರುಸಿನಿಂದ ಕಾಮಗಾರಿ ನಡೆದಿದ್ದರೂ ನಂತರದ ದಿನಗಳಲ್ಲಿ ನಡೆದ ಆಮೆಗತಿಯ ಕಾಮಗಾರಿಯಿಂದ ಗ್ರಾಹಕರು ಹಾಗೂ ವ್ಯಾಪಾರಸ್ಥರು ತೊಂದರೆಗೆ ಸಿಲುಕಿದ್ದಾರೆ. ಅರೆಬರೆ ಕಾಮಗಾರಿ ನಡೆದಿದ್ದರೂ ಕಳೆದ ವಿಧಾನಸಭೆ ಚುನಾವಣೆಗೂ ಮೊದಲು ಉದ್ಘಾಟನೆ ಮಾಡಲಾಗಿತ್ತು. ಉದ್ಘಾಟನೆಗೊಂಡು ಇಷ್ಟು ದಿನವಾದರೂ ಪ್ರಯೋಜನ ಇಲ್ಲವಾಗಿದೆ.
ಮಂಗಳೂರು, ಮೈಸೂರು, ಕೊಣನೂರು, ಹಾಸನ, ರಾಮನಾಥಪುರ, ಚನ್ನರಾಯಪಟ್ಟಣ, ಅರಕಲಗೂಡು ಸೇರಿದಂತೆ ಹಲವು ಸ್ಥಳಗಳಿಂದ ಮಡಿಕೇರಿಗೆ ದಿನಸಿ ಪದಾರ್ಥ ಹಾಗೂ ತರಕಾರಿಗಳನ್ನು ವ್ಯಾಪಾರಕ್ಕೆಂದು ತರುತ್ತಾರೆ. ಆದರೆ, ಇಲ್ಲಿ ಸೂಕ್ತ ವ್ಯವಸ್ಥೆಯೇ ಇಲ್ಲದೇ ಸಂಕಟ ಪಡುವ ಸ್ಥಿತಿಯಿದೆ. ಬೇಸಿಗೆಯಲ್ಲಿ ಬಿಸಿಲಿನಲ್ಲಿ ಒಣಗುತ್ತಾ, ಮಳೆಗಾಲದಲ್ಲಿ ಮಳೆಯಲ್ಲಿ ನಡುಗುತ್ತಾ ವ್ಯಾಪಾರ ನಡೆಸಬೇಕಾದ ಪರಿಸ್ಥಿತಿಯಿದೆ.
ಕಟ್ಟಡ ಉದ್ಘಾಟನೆಗೊಂಡರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಜತೆಗೆ, ಮುಕ್ತಾಯಗೊಂಡಿರುವ ಕಾಮಗಾರಿಗಳಲ್ಲಿಯೂ ಗುಣಮಟ್ಟ ಇಲ್ಲ ಎಂದು ವ್ಯಾಪಾರಿಯೊಬ್ಬರು ದೂರುತ್ತಾರೆ.
ಖರೀದಿಗೆ ಬರುವ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ; ಶೌಚಾಲಯದ ವ್ಯವಸ್ಥೆಯೂ ಇಲ್ಲ. ಇದೇ ಸ್ಥಿತಿ ಮುಂದುವರಿದರೆ ಮಳೆಗಾದಲ್ಲಿ ಹೇಗಪ್ಪಾ ವ್ಯಾಪಾರ ನಡೆಸುವುದು ಎಂದು ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ಸದಸ್ಯರು ನೋವು ತೋಡಿಕೊಳ್ಳುತ್ತಾರೆ. ಜೂನ್ಗೂ ಮೊದಲು ಮಾರುಕಟ್ಟೆ ಪ್ರಾಂಗಣ ಬಳಕೆಗೆ ಬರಬೇಕು ಎಂದೂ ಒತ್ತಾಯಿಸುತ್ತಾರೆ.
ಅಶುಚಿತ್ವ: ನೂತನ ಮಾರುಕಟ್ಟೆ ಎರಡು ಅಂತಸ್ತಿನಿಂದ ಕೂಡಿದೆ. ಮೇಲಿನ ಅಂತಸ್ತಿನಲ್ಲಿ ವ್ಯಾಪಾರ ನಡೆಸಲು ಹಾಗೂ ಕೆಳ ಅಂತಸ್ತನ್ನು ಪಾರ್ಕಿಂಗ್ಗೆ ಮೀಸಲೀಡಲಾಗಿದೆ. ಆದರೆ, ಕೆಳ ಅಂತಸ್ತಿನಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಒಂದೆಡೆ ಕಸದ ರಾಶಿ ತುಂಬಿದೆ. ಪ್ಲಾಸ್ಟಿಕ್, ಬಟ್ಟೆಗಳ ತ್ಯಾಜ್ಯಗಳು ಹಾಗೂ ಬಿಡಾಡಿ ದನಗಳಿಗೆ ಆಶ್ರಯ ತಾಣವಾಗಿದೆ. ಮಳೆಗಾಲದಲ್ಲಿ ಕಳೆಭಾಗದಲ್ಲಿ ಮಳೆಯ ನೀರು ಆವರಿಸಿಸುವ ಆತಂಕವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.