ADVERTISEMENT

ಉತ್ತರ ಕೊಡಗಿನಲ್ಲಿ ‘ಸುಗ್ಗಿ’ ಸಂಭ್ರಮಕ್ಕೆ ಸಿದ್ಧತೆ

ನಮ್ಮೂರು ನಮ್ಮ ಜಿಲ್ಲೆ

ಡಿ.ಪಿ.ಲೋಕೇಶ್
Published 30 ಮಾರ್ಚ್ 2019, 20:00 IST
Last Updated 30 ಮಾರ್ಚ್ 2019, 20:00 IST
ಸೋಮವಾರಪೇಟೆ ವ್ಯಾಪ್ತಿಯ ಕೂತಿನಾಡು ಸುಗ್ಗಿಯ ಸಂದರ್ಭ ದೇವರ ಒಡೆಕಾರರನ್ನು ಜೋಕಾಲಿಯಲ್ಲಿ ತೂಗುತ್ತಿರುವ ಗ್ರಾಮಸ್ಥರು 
ಸೋಮವಾರಪೇಟೆ ವ್ಯಾಪ್ತಿಯ ಕೂತಿನಾಡು ಸುಗ್ಗಿಯ ಸಂದರ್ಭ ದೇವರ ಒಡೆಕಾರರನ್ನು ಜೋಕಾಲಿಯಲ್ಲಿ ತೂಗುತ್ತಿರುವ ಗ್ರಾಮಸ್ಥರು    

ಸೋಮವಾರಪೇಟೆ: ಉತ್ತರ ಕೊಡಗಿನ ಹಲವು ಗ್ರಾಮಗಳಲ್ಲಿ ಸುಗ್ಗಿಯ ಸಂಭ್ರಮಾಚರಣೆಗೆ ಸಿದ್ಧತೆ ಜೋರಾಗಿದೆ. ‘ಮುಂದಿನ ಸಾಲಿನ ವ್ಯವಸಾಯಕ್ಕೆ ಪ್ರಕೃತಿ ದೇವಿ ಮುನಿಸಿಕೊಳ್ಳದೇ ಕಾಲಕಾಲಕ್ಕೆ ತಕ್ಕಂತೆ ಮಳೆ, ಬೆಳೆ ಆಗಲಿ...’ ಎಂದು ಗ್ರಾಮ ದೇವರನ್ನು ಪೂಜಿಸಲಾಗುತ್ತದೆ.

ಪ್ರತಿವರ್ಷ ಏಪ್ರಿಲ್‌ನಲ್ಲಿ ಆರಂಭವಾಗುವ ಸುಗ್ಗಿ, ಮೇನಲ್ಲಿಯೂ ಮುಂದುವರಿಯುತ್ತದೆ. ತೋಳೂರುಶೆಟ್ಟಳ್ಳಿ, ನಗರಳ್ಳಿ, ಕುಮಾರಳ್ಳಿ, ಹಾನಗಲ್ ಶೆಟ್ಟಳ್ಳಿ, ಶಾಂತಳ್ಳಿ, ಬೆಂಬಳೂರು, ಚೌಡ್ಲು... ಮುಂತಾದ ಗ್ರಾಮಗಳಲ್ಲಿ ಸುಗ್ಗಿ ನಡೆಸಲಾಗುತ್ತದೆ.

ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಮಯ ಸನ್ನಿಹಿತವಾಗುತ್ತಿರುವಾಗಲೇ ಕೃಷಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಬಾರದು. ಗ್ರಾಮ ಸುಭೀಕ್ಷೆಯಿಂದಿರಬೇಕು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ಹಾಗೂ ಪ್ರಕೃತಿದೇವಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವಿಶಿಷ್ಟ ಹಬ್ಬವಾದ ಸುಗ್ಗಿ ಉತ್ಸವಗಳು ತಾಲ್ಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಶ್ರದ್ಧಾಭಕ್ತಿಯಿಂದ ಇಂದಿಗೂ ಜರುಗುತ್ತಿದ್ದು, ಈ ಎಲ್ಲ ಪೂಜಾ ಕಾರ್ಯಕ್ರಮಗಳು ಜನಪದ ಶೈಲಿಯಲ್ಲಿಯೇ ಜರುಗುತ್ತವೆ.

ADVERTISEMENT

ಮಲೆನಾಡಿನ ಪ್ರದೇಶವಾದ ಪುಷ್ಪಗಿರಿ ಬೆಟ್ಟ ಶ್ರೇಣಿಯ ತಪ್ಪಲಲ್ಲಿರುವ ಗ್ರಾಮಗಳಾದ ಕೂತಿ ನಾಡು ಸುಗ್ಗಿ, ತೋಳೂರುಶೆಟ್ಟಳ್ಳಿ ಗ್ರಾಮಗಳಲ್ಲಿ ಏಪ್ರಿಲ್ ಕೊನೆಯಿಂದ ಆರಂಭವಾಗುತ್ತದೆ.

ಈ ವ್ಯಾಪ್ತಿಯ ಗ್ರಾಮಗಳ ಗ್ರಾಮದೇವರಾದ ಸಬ್ಬಮ್ಮದೇವಿಗೆ ಊರಿನ ಎಲ್ಲರೂ ಒಟ್ಟುಸೇರಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಆಚರಣೆ ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು ಈ ಸಂದರ್ಭ ಗ್ರಾಮದ ಹೊರಭಾಗಗಳಲ್ಲಿ ನೆಲೆಸಿರುವ ಮಂದಿಯೂ ಗ್ರಾಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಇಡೀ ಗ್ರಾಮ ಸಂಭ್ರಮದಲ್ಲಿರುತ್ತದೆ.

ಸುಗ್ಗಿ ಉತ್ಸವ ಪ್ರಾರಂಭ ಆಗುತ್ತಿದ್ದಂತೆಯೇ ಗ್ರಾಮದ ಜನರ ಮನೆಗಳಲ್ಲಿ ಗ್ರಾಮದೇವತೆಗಳ ಪೂಜೆಗಳು ನಡೆಯುತ್ತವೆ. ಗ್ರಾಮದಲ್ಲಿ ರೋಗರುಜಿನಗಳು ಬಾರದಂತೆ, ಮುಂದೆ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ನಡೆದು ಸಮೃದ್ಧ ಫಸಲು ಕೈಸೇರುವುದಕ್ಕೆ ಗ್ರಾಮ ದೇವತೆಗಳು ಹರಸಬೇಕೆಂದು ಗ್ರಾಮಸ್ಥರೆಲ್ಲಾ ಒಟ್ಟಾಗಿ ಸೇರಿ ಪ್ರಾರ್ಥನೆ ಮಾಡುತ್ತಾರೆ.

ಸುಗ್ಗಿ ಉತ್ಸವ ಆಚರಿಸಲು ಕೆಲವು ಕಟ್ಟುಪಾಡುಗಳನ್ನು ವಿಧಿಸಿಕೊಂಡಿರುವ ಇಲ್ಲಿಯವರು, ಆರಂಭದ ದಿನಗಳಿಂದ ‘ಸುಗ್ಗಿ ಸಾರು’ ಎಂಬ ಕಟ್ಟುನಿಟ್ಟಿನ ಅಚರಣೆ ಕೈಗೊಳ್ಳಲಾಗುತ್ತದೆ. ಉತ್ಸವದ 15 ದಿನಗಳಲ್ಲಿ ಹಸಿ ಮರ ಕಡಿಯುವುದು, ಒಣಗಿದ ಗಿಡ ಬಳ್ಳಿಗಳು ತುಂಡಾಗದಂತೆ ಎಚ್ಚರ ವಹಿಸುತ್ತಾರೆ.

ಕೂತಿ ನಾಡು ಸಬ್ಬಮ್ಮ ದೇವಿಯ (ಲಕ್ಷ್ಮಿ) ಉತ್ಸವ ಎಂದೇ ಹೆಸರಾಗಿರುವ ನಗರಳ್ಳಿ ಸುಗ್ಗಿ ಹಲವು ವೈಶಿಷ್ಟ್ಯಗಳೊಂದಿಗೆ ನೆರವೇರುತ್ತದೆ. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಪಕ್ಕದ ಸಕಲೇಶಪುರ ತಾಲ್ಲೂಕಿನ ಓಡಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿ ಕಾಲದಿಂದ ನಡೆದು ಬಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಉತ್ಸವದ ಕೊನೆಯದಿನ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜಾನಪದದ ಭಾಗವಂತೂ ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವವನ್ನು ಪ್ರಕಟಗೊಳಿಸುವ ಬಹುಮುಖ್ಯ ಕ್ಷಣಗಳಾಗುತ್ತವೆ.

ಸಮೀಪದ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಕೂಡ ಈ ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಸುಗ್ಗಿ ಉತ್ಸವವಾಗಿದೆ. ಬೀರೇದೇವರ ಹಬ್ಬ ಆಚರಣೆಯೊಂದಿಗೆ ಸುಗ್ಗಿ ಆರಂಭವಾಗಲಿದ್ದು, ಗುಮ್ಮನ ಮರಿ ಪೂಜೆ, ಸಾಮೂಹಿಕ ಭೋಜನ ಊರೊಡೆಯನ ಪೂಜೆ, ಬೆಂಕಿಕೊಂಡ ಹಾಯುವುದು, ಮೊದಲ ಬೇಟೆ ನಂತರ ಊರು ಸುಗ್ಗಿ, ದೇವರ ಗಂಗಾಸ್ನಾನ ಹಾಗೂ ದೊಡ್ಡ ಪೂಜೆಗಳು ಸುಗ್ಗಿ ಉತ್ಸವದ ಪ್ರಮುಖ ಭಾಗಗಳಾಗಿವೆ.

ಇದರೊಂದಿಗೆ ಸೋಮವಾರಪೇಟೆ ವ್ಯಾಪ್ತಿಯ ಚೌಡ್ಲು, ಯಡೂರು, ಹಾನಗಲ್ಲು ಶೆಟ್ಟಳ್ಳಿ ಗ್ರಾಮಗಳಲ್ಲೂ ಸುಗ್ಗಿ ಉತ್ಸವ ನಡೆಯಲಿವೆ. ಈ ಎಲ್ಲ ಪೂಜಾ ಕಾರ್ಯಗಳಲ್ಲಿ ಗ್ರಾಮಸ್ಥರೊಂದಿಗೆ ಅಕ್ಕಪಕ್ಕದ ಗ್ರಾಮದವರು ಹಾಗೂ ನೆಂಟರಿಷ್ಟರು ಸಹ ಪಾಲ್ಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.