ಸುಂಟಿಕೊಪ್ಪ: ನೆರೆ ಹಾವಳಿಯಿಂದ ಸಂತ್ರಸ್ತರಾಗಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದಾರೆ.
ಸಮೀಪದ ಕಾಂಡನಕೊಲ್ಲಿಯ ಹಾಲೇರಿ ಗ್ರಾಮದ ಲಾರೆನ್ಸ್ (73) ಮೃತಪಟ್ಟ ಸಂತ್ರಸ್ತ.
ಪ್ರಕೃತಿ ವಿಕೋಪದ ವೇಳೆ ಅವರ ಮನೆಯು ಕಣ್ಣೆದುರಿಗೆ ಧರೆಗುರುಳಿತ್ತು. ಆಶ್ರಯ ಕಳೆದುಕೊಂಡು ಹಲವು ದಿನಗಳ ಕಾಲ ಪರಿಹಾರ ಕೇಂದ್ರ ಸೇರಿದ್ದರು. ಕನಸಿನ ಮನೆಯು ಕುಸಿದುಬಿದ್ದ ಕಾರಣ ಕಂಗಾಲಾಗಿದ್ದ ಲಾರೆನ್ಸ್, ದಿನದಿಂದ ದಿನಕ್ಕೆ ಮಾನಸಿಕವಾಗಿ ನೊಂದಿದ್ದರು. ಅವರ ಆರೋಗ್ಯದಲ್ಲೂ ಏರುಪೇರಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೈಸೂರು ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮುಂಜಾನೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.