ಮಡಿಕೇರಿ: ಕೃಷಿ ಭೂಮಿಯನ್ನು ಉಳಿಸಿಕೊಳ್ಳಲೇಬೇಕು. ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಪರಿವರ್ತಿಸಬಾರದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಸಲಹೆ ನೀಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕನೆಕ್ಟಿಂಗ್ ಕೊಡವಾಸ್ ವತಿಯಿಂದ ಮುತ್ತಾರ್ಮುಡಿ ಗದ್ದೆಯಲ್ಲಿ ಸೋಮವಾರ ನಡೆದ ‘ಬೇಲ್ರ ಕೋಯಿಮೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿದ್ದೇವೆ. ಕೃಷಿ ಭೂಮಿಯನ್ನು ಎಲ್ಲರೂ ಉಳಿಸಬೇಕು. ಭತ್ತ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಇದು ಎಲ್ಲರಿಗೂ ಅನ್ನ ನೀಡುತ್ತದೆ ಎನ್ನುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಹೇಳಿದರು.
ಇಡೀ ಭರತ ಖಂಡದಲ್ಲಿ ಕೊಡಗಿನ ಭೂಮಿ ಸ್ವರ್ಗದಂತಿದೆ. ಇಲ್ಲಿನ ರೈತರು ಭತ್ತ, ಕಾಫಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮುಂದಿನ ತಲೆಮಾರಿಗೆ ಭತ್ತ ಕೃಷಿಯನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಭತ್ತ ಕೃಷಿ ಮಾಹಿತಿ ನೀಡುವ ಮೂಲಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ನಿವೃತ್ತ ಕೃಷಿ ಅಧಿಕಾರಿ ಅಜ್ಜಿಕುಟ್ಟಿರ ಸಿ.ಗಿರೀಶ್ ಮಾತನಾಡಿ, ‘ಹಿಂದೆ ಎತ್ತು ಬಳಸಿ ಕೃಷಿ ಮಾಡುತ್ತಿದ್ದರು. ಈಗ ತಾಂತ್ರಿಕತೆಯಿಂದಾಗಿ ಟ್ರ್ಯಾಕ್ಟರ್, ಟಿಲ್ಲರ್ ಬಳಸಿಕೊಂಡು ಕೃಷಿ ಮಾಡುತ್ತಿದ್ದೇವೆ. ಹೊಸ ಹೊಸ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
ಕೇಚಮಡ ಧ್ರುವ್ ದೇವಯ್ಯ ಅವರು ಭತ್ತದ ಗದ್ದೆ ಹದ ಮಾಡುವ ವಿಧಾನ, ಭತ್ತದ ಬೆಳೆ ನಾಟಿ ಮಾಡಿ ಉತ್ತಮ ಬೆಳೆ ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಕೃಷಿಕ ಪುದಿಯೊಕ್ಕಡ ಸೂರಜ್ ಬೋಜಣ್ಣ ಅವರು ಆಧುನಿಕ ಕಾಲಕ್ಕೆ ತಕ್ಕಂತೆ ಕೃಷಿ ಚಟುವಟಿಕೆ ಕೈಗೊಂಡು ಉತ್ತಮ ಭತ್ತ ಇಳುವರಿ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಕನೆಕ್ಟಿಂಗ್ ಕೊಡವಾಸ್ ಅಧ್ಯಕ್ಷ ಶಾಂತೆಯಂಡ ನಿರನ್ ನಾಚಪ್ಪ ಮಾತನಾಡಿದರು.
ಕದ್ದನಿಯಂಡ ಶ್ರೀ ಗಣೇಶ್ ಅವರು ಕೊಡಗು ಜಿಲ್ಲೆಗೆ ಏರಿ ಕಟ್ಟುವ ಯಂತ್ರವನ್ನು ಪ್ರಥಮ ಬಾರಿಗೆ ಪರಿಚಯಿಸಿದರು. 1 ಗಂಟೆಗೆ 4 ಎಕರೆ ಭೂಮಿಯಲ್ಲಿ ಏರಿ ಕಟ್ಟಬಹುದಾಗಿದೆ. ಇದು ಜಿಲ್ಲೆಯಲ್ಲಿ ಬಹು ಬೇಡಿಕೆಯ ಯಂತ್ರವಾಗಿರುವುದು ವಿಶೇಷ. ಈ ಯಂತ್ರದ ಕುರಿತು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
ಇದಕ್ಕೂ ಮುನ್ನ ಮುತ್ತಾರ್ಮುಡಿ ಗದ್ದೆಯಲ್ಲಿ ಮೊಳಕೆ ಒಡೆದ ಭತ್ತ ಬಿತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸೋಮೆಂಗಡ ಗಣೇಶ್ ತಿಮ್ಮಯ್ಯ ಮತ್ತು ಅತಿಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಚಾಲಕರಾದ ಕಂಬೆಯಂಡ ಡೀನಾ ಬೋಜಣ್ಣ, ಚೊಟ್ಟೆಯಂಡ ಎ.ಸಂಜು ಕಾವೇರಪ್ಪ, ಸದಸ್ಯರಾದ ಪುತ್ತರಿರ ಪಪ್ಪುತಿಮ್ಮಯ್ಯ, ಕೊಂಡಿಜಮ್ಮನ ಬಾಲಕೃಷ್ಣ, ಪಾನಿಕುಟ್ಟಿರ ಕುಟ್ಟಪ್ಪ, ಪೊನ್ನಿರ ಗಗನ್, ಚೆಪ್ಪುಡಿರ ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ನಾಪಂಡ ಗಣೇಶ್, ಚೊಟ್ಟೆಯಂಡ ಸಂಜು ಕಾವೇರಪ್ಪ ಭಾಗವಹಿಸಿದ್ದರು.
ಭತ್ತ ಕೃಷಿ ಬಿಡದಿರಲು ಸಲಹೆ ಉತ್ತಮ ಇಳುವರಿ ಪಡೆಯುವ ವಿಧಾನದ ಮಾಹಿತಿ ವಿದ್ಯಾರ್ಥಿಗಳಿಗೆ ಭತ್ತ ಕೃಷಿಯ ಪರಿಚಯ
45 ವರ್ಷದಿಂದ ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಕೃಷಿಯು ಬದುಕಿನ ಅವಿಭಾಜ್ಯ ಅಂಗವಾಗಿದೆಸೋಮಂಗಡ ಗಣೇಶ್ ತಿಮ್ಮಯ್ಯ ಕೃಷಿಕ
ನೂರಾರು ವಿದ್ಯಾರ್ಥಿಗಳು ಭಾಗಿ ಅಪರೂಪದ ಈ ಕಾರ್ಯಕ್ರಮದಲ್ಲಿ ಕೇವಲ ಹಿರಿಯರಷ್ಟೇ ಅಲ್ಲ ಅವರಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮುತ್ತಾರ್ಮುಡಿ ಗದ್ದೆಯಲ್ಲಿ ಮೊಳಕೆ ಒಡೆದ ಭತ್ತ ಬಿತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಗಮನ ಸೆಳೆಯಿತು. ಬೀಳುತ್ತಿದ್ದ ಚಿಟಪಟ ಮಳೆಯ ಹನಿಯ ನಡುವೆಯೂ ವಿದ್ಯಾರ್ಥಿಗಳು ಗದ್ದೆಯ ಕೆಸರಿನಲ್ಲಿ ಮಿಂದೆದ್ದರು. ಮೂರ್ನಾಡು ಪಿಯು ಕಾಲೇಜು ಜ್ಞಾನಜ್ಯೋತಿ ಕಾಲೇಜು ಕೊಡಗು ವಿದ್ಯಾಲಯ ಮಾರುತಿ ಶಾಲೆಯ ನೂರಾರು ವಿದ್ಯಾರ್ಥಿಗಳು ಬೇಲ್ರ ಕೋಯಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.