ಗೋಣಿಕೊಪ್ಪಲು: ನಾಗರಹೊಳೆ ಅತ್ತೂರು ಕೊಲ್ಲಿ ಗಿರಿಜನ ಹಾಡಿಗೆ ಭಾನುವಾರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಹಾಡಿ ಜನರೊಂದಿಗೆ ಮಾತುಕತೆ ನಡೆಸಿದರು.
ಅರಣ್ಯ ಇಲಾಖೆ ಕೆಲವು ಕಾನೂನುಗಳನ್ನು ಮುಂದಿಟ್ಟುಕೊಂಡು ಹಾಡಿ ನಿವಾಸಿಗಳಿಗೆ ಸಮಸ್ಯೆ ಒಡ್ಡುತ್ತಿದೆ. ಇದರಿಂದ ಹಾಡಿ ನಿವಾಸಿಗಳು ಯಾವುದೇ ಆತಂಕಕ್ಕೆ ಒಳಗಾಗಬಾರದು. ತಾವು ವಾಸಿಸುತ್ತಿರುವ ಜಾಗದ ಬಗ್ಗೆ ಹಕ್ಕು ಪ್ರತಿಪಾದಿಸಲು ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಅರಣ್ಯ ನಿವಾಸಿಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಸಮಸ್ಯೆ ಸರ್ಕಾರದ ಮಟ್ಟದಲ್ಲಿದ್ದು ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಅರಣ್ಯ ಇಲಾಖೆಗೆ ಸೂಚಿಸಿದರು. ಅರಣ್ಯ ನಿವಾಸಿಗಳು ಕೂಡ ತಾವು ಈಗ ವಾಸಿಸುತ್ತಿರುವ ವಿವಾದಿತ ಜಾಗದಲ್ಲಿ ಯಾವುದೇ ರೀತಿಯ ಹೊಸ ಗುಡಿಸಲು ನಿರ್ಮಾಣಕ್ಕೆ ಮುಂದಾಗಬಾರದು ಎಂದು ಕಿವಿಮಾತು ಹೇಳಿದರು. ಹೊರಗಿನವರ ಪ್ರವೇಶದ ಬಗ್ಗೆಯೂ ಜಾಗರೂಕರಾಗಿರುವಂತೆ ಹಾಡಿ ನಿವಾಸಿಗಳಿಗೆ ಸೂಚಿಸಿದರು.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ತಹಶೀಲ್ದಾರ್ ಮೋಹನ್, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಿಮ್ಮಣಮಾಡ ರವಿ, ಕಟ್ಟಿ ಕಾರ್ಯಪ್ಪ, ಪಲ್ವಿನ್ ಪೂಣಚ್ಚ, ಕೆ.ಬಾಡಗ ಪಂಚಾಯಿತಿ ಅಧ್ಯಕ್ಷ ರಿತೀಶ್, ಅಜ್ಜಿಕುಟ್ಟಿರ ಗಿರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.