ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ವಾಸದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.
ಗುರುವಾರ ಸಂಜೆ ಗುಡುಗು ಸಹಿತ ಮಳೆಯಾಗುತ್ತಿದ್ದ ಸಂದರ್ಭ ಶಾಂತಳ್ಳಿ ನಿವಾಸಿ ಬಿ.ಡಿ. ಕಾಳಪ್ಪ ಅವರ ಮನೆ ಪಕ್ಕದ ಬಳಂಜಿ ಮರಕ್ಕೆ ಸಿಡಿಲು ಬಡಿದಿದೆ. ಪರಿಣಾಮ ಮರ ತುಂಡಾಗಿ ಪಕ್ಕದಲ್ಲೇ ಇದ್ದ ಮನೆಯ ಮೇಲೆ ಬಿದ್ದಿದೆ.
ಮರ ಬೀಳುತ್ತಿದ್ದಂತೆ ಮನೆಯೊಳಗಿದ್ದ ಕಾಳಪ್ಪ ಮತ್ತು ಪತ್ನಿ ರತ್ನಾ ಅವರು ಅಡುಗೆ ಮನೆಗೆ ಓಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ಚಾವಣಿ, ಹೆಂಚುಗಳು, ಗೋಡೆಗಳಿಗೆ ಹಾನಿಯಾಗಿದ್ದು, ಸ್ಥಳಕ್ಕೆ ಗ್ರಾಮ ಲೆಕ್ಕಿಗ ಕರಿಬಸವಯ್ಯ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕೆರೆಗಳಿಗೆ ನೀರು
ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯ ಕೈಕಾಡು, ಕಕ್ಕಬ್ಬೆ ಹಾಗೂ ಕುಂಜಿಲ ಭಾಗಗಳಲ್ಲಿ ಶುಕ್ರವಾರ ಮಧ್ಯಾಹ್ನ ಉತ್ತಮ ಮಳೆ ಸುರಿಯಿತು.
ಈ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಕೆರೆಗಳು ಭರ್ತಿಯಾಗಿವೆ, ತೋಡುಗಳು ತುಂಬಿ ಹರಿಯುತ್ತಿವೆ.
ಮಾರ್ಚ್ ತಿಂಗಳಲ್ಲಿ ಕಾಫಿ ತೋಟಗಳಿಗೆ ನೀರು ಹಾಯಿಸಿದ್ದರಿಂದ ಬಹುತೇಕ ಕೆರೆಗಳು ಖಾಲಿಯಾಗಿದ್ದವು. ಈಗ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕೆರೆಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ ಎಂದು ಬೇತು ಗ್ರಾಮದ ಬೆಳೆಗಾರ ನಾರಾಯಣ ಪ್ರತಿಕ್ರಿಯಿಸಿದರು.
ಕೃಷಿ ಹೊಂಡಗಳಲ್ಲೂ ನೀರು ತುಂಬಿದ್ದು, ಸುತ್ತಲ ಪರಿಸರ ಹಸಿರಿನಿಂದ ಕಂಗೊಳಿಸುತ್ತಿವೆ.
ಸಾಧಾರಣ ಮಳೆ
ವಿರಾಜಪೇಟೆ: ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಕೆಲಕಾಲ ಸಾಧಾರಣ ಮಳೆ ಸುರಿಯಿತು.
ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾರವರಣವಿತ್ತು, ಮಧ್ಯಾಹ್ನ 3 ರ ಸುಮಾರಿಗೆ ಕೆಲಕಾಲ ಮಳೆ
ಸುರಿಯಿತು.
ರಾತ್ರಿಯೂ ಗುಡುಗು ಸಹಿತ ಉತ್ತಮ ಮಳೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.