ADVERTISEMENT

ಪರಿಹಾರ ಕೇಂದ್ರಕ್ಕೆ ಅಧಿಕಾರಿಗಳ ದೌಡು

‘ತಾತ್ಕಾಲಿಕ ಹಣ ಬೇಡ, ಶಾಶ್ವತ ಪುನರ್ವಸತಿ ಕಲ್ಪಿಸಿ’: ಸಂತ್ರಸ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 18:41 IST
Last Updated 20 ನವೆಂಬರ್ 2019, 18:41 IST
ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಜವರೇಗೌಡ, ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು
ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಜವರೇಗೌಡ, ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು   

ಸಿದ್ದಾಪುರ (ಕೊಡಗು ಜಿಲ್ಲೆ): ಸಮೀಪದ ನೆಲ್ಯಹುದಿಕೇರಿಯ ಪರಿಹಾರ ಕೇಂದ್ರಕ್ಕೆ, ಉಪ ವಿಭಾಗಾಧಿಕಾರಿ ಜವರೇಗೌಡ ನೇತೃತ್ವದಲ್ಲಿ ಬುಧವಾರ ಭೇಟಿ ನೀಡಿದ ಅಧಿಕಾರಿಗಳು, ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು.

‘ಪ್ರಜಾವಾಣಿ’ಯ ನ.20ರ ಸಂಚಿಕೆಯಲ್ಲಿ ‘ನಗಣ್ಯವಾದ ಸಂತ್ರಸ್ತರ ಬವಣೆ’ ಶೀರ್ಷಿಕೆ ಅಡಿ ಸಂತ್ರಸ್ತರ ಸಮಸ್ಯೆ ಕುರಿತು ವರದಿ ಪ್ರಕಟವಾದ ಬೆನ್ನಲೇ ಎಚ್ಚೆತ್ತ ಅಧಿಕಾರಿಗಳು, ಸಂತ್ರಸ್ತರ ಸಮಸ್ಯೆ ಕೇಳುವ ಪ್ರಯತ್ನ ಮಾಡಿದರು.

ಪರಿಹಾರ ಕೇಂದ್ರವನ್ನು ಬಿಟ್ಟು ಬಾಡಿಗೆ ಮನೆಗಳಿಗೆ ತೆರಳುವಂತೆ ಮನವಿ ಮಾಡಿದ ಜವರೇಗೌಡ, ಬಾಡಿಗೆ ಮನೆಗೆ ಹೋಗುವ ಪ್ರತಿ ಸಂತ್ರಸ್ತ ಕುಟುಂಬಕ್ಕೆ ₹ 25 ಸಾವಿರ ನೀಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

‘ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಗುರುತಿಸಲಾಗಿದ್ದ ಸರ್ಕಾರಿ ಜಾಗಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ತರಿಗೆ ಸರ್ಕಾರಿ ಒತ್ತುವರಿ ಜಾಗವನ್ನು ತೆರವುಗೊಳಿಸಿ, ಶಾಶ್ವತ ಸೂರು ಒದಗಿಸಲಾಗುವುದು’ ಎಂದು ಹೇಳಿದರು.

‘ತಾತ್ಕಾಲಿಕ ಹಣ ಬೇಡ; ನಮಗೆ ಶಾಶ್ವತ ಪುನರ್ವಸತಿಯನ್ನೇ ಕಲ್ಪಿಸಿ’ ಎಂದು ನೆರೆ ಸಂತ್ರಸ್ತರು ಇದೇ ವೇಳೆ ಮನವಿ ಮಾಡಿಕೊಂಡರು.

ಗ್ರಾಮ ಲೆಕ್ಕಿಗ ಸಂತೋಷ್, ಪಿಡಿಒ ಅನಿಲ್‌ಕುಮಾರ್, ಹೋರಾಟ ಸಮಿತಿ ಮುಖಂಡ ಪಿ.ಆರ್.ಭರತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.