ಗೋಣಿಕೊಪ್ಪಲು: ನಾಗರಹೊಳೆ ವನ್ಯಜೀವಿ ವಿಭಾಗದ ಬಫರ್ ಜೋನ್ ವಲಯದ ತಿತಿಮತಿ ಬಳಿ ಸಫಾರಿ ಆರಂಭಕ್ಕೆ ಸಿದ್ಧತೆಗಳು ಆರಂಭವಾಗಿವೆ. ಮಜ್ಜಿಗೆ ಹಳ್ಳದ ಬಳಿ ಪ್ರವೇಶದ ಗೇಟ್ ನಿರ್ಮಿಸಲು ಈಚೆಗೆ ಭೂಮಿಪೂಜೆ ನೆರವೇರಿಸಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಆರ್ಎಫ್ಒ ಗಣರಾಜ್, ‘ತಿತಿಮತಿಯಿಂದ ಆನೆಚೌಕೂರು ಕಡೆಗೆ ತೆರಳುವ ಹೆದ್ದಾರಿಯ ಎಡಭಾಗದ ಅರಣ್ಯ ಬಫರ್ ವಲಯವಾಗಿದೆ. ಮಾವಕಲ್ ಅರಣ್ಯ ಪ್ರದೇಶಕ್ಕೆ ಸೇರುವ ದೇವಮಚ್ಚಿ ಅರಣ್ಯ ಭಾಗದಲ್ಲಿ ಗದ್ದಿಗೆ ಬೆಟ್ಟ ಒಳಗೊಂಡಂತೆ 16 ಕಿ.ಮೀ (8 ಕಿ.ಮೀ ಹೋಗಲು, ಬರುವಾಗ ಮತ್ತೊಂದು ಮಾರ್ಗದಲ್ಲಿ 8 ಕಿ.ಮೀ) ದೂರದ ಸಫಾರಿಗೆ ಯೋಜನೆಯ ರೂಪುರೇಷೆ ತಯಾರಿಸಲಾಗುತ್ತಿದೆ. ಮಳೆಗಾಲವಾಗಿದ್ದರಿಂದ ರಸ್ತೆ ಕೆಲಸ ನಡೆಸಲು ಆಗುತ್ತಿಲ್ಲ. ಮಳೆ ಮುಗಿದ ಬಳಿಕ ಕೆಲಸ ಆರಂಭಗೊಳ್ಳಲಿದೆ’ ಎಂದು ಹೇಳಿದರು.
‘ಮಜ್ಜಿಗೆ ಹಳ್ಳದ ಅರಣ್ಯ ಸಸ್ಯಕ್ಷೇತ್ರದ ಬಳಿ ಟಿಕೆಟ್ ಕೌಂಟರ್ ಮತ್ತು ಇತರ ಕಚೇರಿಗಳು ನಿರ್ಮಾಣಗೊಳ್ಳಲಿವೆ. ಅದರ ಪಕ್ಕದಲ್ಲಿಯೇ ಸಫಾರಿ ಪ್ರವೇಶ ದ್ವಾರವೂ ಆರಂಭಗೊಳ್ಳಲಿದೆ. ಇದೇ ಅರಣ್ಯಕ್ಕೆ ಹೊಂದಿಕೊಂಡಂತಿರುವ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತೂರು ಬಳಿಯಿಂದಲೂ ಮತ್ತೊಂದು ಸಫಾರಿ ಪ್ರವೇಶದ ಗೇಟ್ ನಿರ್ಮಾಣಗೊಳ್ಳಲಿದೆ’ ಎಂದು ತಿಳಿಸಿದರು.
‘ಇದೀಗ ನೂತನ ಸಫಾರಿಗೆ ಗೊತ್ತುಪಡಿಸಿರುವ 240 ಚದರ ಕಿ.ಮೀ ಮಾವಕಲ್ ಅರಣ್ಯ ಪ್ರದೇಶ 2 ವರ್ಷದ ಹಿಂದೆ ಮೀಸಲು ಅರಣ್ಯವಾಗಿತ್ತು. ವನ್ಯಜೀವಿಗಳ ಸಂಖ್ಯೆ ಹೆಚ್ಚಾದಂತೆ ನಾಗರಹೊಳೆ ವನ್ಯಜೀವಿ ವಿಭಾಗಕ್ಕೆ ಈ ಮೀಸಲು ಅರಣ್ಯವನ್ನು ಸೇರಿಸಲಾಯಿತು. ಈಗ ಇಲ್ಲೂ ಜಿಂಕೆ, ಕಾಡುಕೋಣ, ಆನೆ, ಹುಲಿ, ಚಿರತೆಗಳ ಓಡಾಟ ಹೆಚ್ಚಾಗಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.