
ಕುಶಾಲನಗರ: ‘ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಉತ್ತಮ ಗುಣ ಹಾಗೂ ಹವ್ಯಾಸವನ್ನು ಕಲಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು’ ಎಂದು ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಎನ್.ಕೆ.ಜ್ಯೋತಿ ಸಲಹೆ ನೀಡಿದರು.
ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರಿನ ಐಶ್ವರ್ಯ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ನೃತ್ಯ ಕಲಾಂಜಲಿ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪೋಷಕರೇ ಮಕ್ಕಳ ಬೆನ್ನೆಲುಬು, ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು. ಶಿಕ್ಷಕರು ಎರಡನೇ ಗುರು, ಆದ್ದರಿಂದ ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ’ ಎಂದರು.
‘ಮನೆಯಲ್ಲಿ ಮಕ್ಕಳ ಕೈಗೆ ಮೊಬೈಲ್ ನೀಡಿ ನೀವು ಮನೆ ಕೆಲಸ ಮಾಡುವುದು ಹಾಗೂ ಟಿ.ವಿ ನೋಡುವಂಥ ತಪ್ಪು ಮಾಡಬೇಡಿ. ಇದರಿಂದ ಮಕ್ಕಳು ತಪ್ಪು ದಾರಿ ತುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಡಿಜಿಟಲ್ ಯುಗ, ಮಕ್ಕಳಿಗೆ ಎಲ್ಲಾ ರೀತಿಯ ಜ್ಞಾನ ಇದೆ. ಅವರು ತುಂಬಾ ಬುದ್ಧಿವಂತರಾಗಿದ್ದಾರೆ. ಇಂತಹ ಮಕ್ಕಳಿಗೆ ಮೊಬೈಲ್ ಬದಲು ಕಂಪ್ಯೂಟರ್ ಜ್ಞಾನ ಬೆಳೆಸಬೇಕು’ ಎಂದರು.
ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಮಾತನಾಡಿ, ‘ವಿದ್ಯಾಸಂಸ್ಥೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ಕೌಶಲಗಳನ್ನು ಕಲಿಸುತ್ತಿದೆ. ಈ ಸಂಸ್ಥೆ ಪ್ರತಿವರ್ಷ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ತರುವ ಮೂಲಕ ಉತ್ತಮ ಸಾಧನೆ ಮಾಡುತ್ತಿದೆ’ ಎಂದರು.
ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪುಲಿಯಂಡ ರಾಮ್ ದೇವಯ್ಯ ಅಧ್ಯಕ್ಷತೆ ವಹಿಸಿದ್ದರು.
ಪಿಯು ಕಾಲೇಜು ಪ್ರಾಂಶುಪಾಲ ಅಮ್ಮತಾಂಡ ಜೋಯ್ಯಪ್ಪ ವರದಿ ವಾಚಿಸಿದರು. ಪ್ರಮುಖರಾದ ಪುಲಿಯಂಡ ಸುಬ್ಬಯ್ಯ, ಜಯಂತಿ ಸುಬ್ಬಯ್ಯ ಹಾಗೂ
ಕಾವೇರಮ್ಮ ಪುಲಿಯಂಡರಾಮು, ಉಪ ಪ್ರಾಂಶುಪಾಲ ಮದನ್ ಪಾಲ್ಗೊಂಡಿದ್ದರು. ಉಪನ್ಯಾಸಕರಾದ ರೇಷ್ಮ ನವೀನ ಸ್ವಾಗತಿಸಿದರು.
ಹರ್ಷಿತ ದೇಚಮ್ಮ ವಂದಿಸಿದರು. ಶ್ರೆರ್ಲಿ ಸುಬ್ಬಯ್ಯ ನಿರೂಪಿಸಿದರು.
ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.