ಸೋಮವಾರಪೇಟೆ: ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮುಷ್ಕರಕ್ಕೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಬೆಂಬಲ ಸೂಚಿಸಿ ಗುರುವಾರ ಬಂದ್ ಆಚರಿಸಿದರು.
ಪ್ರತಿಭಟನೆಯಿಂದ ರೋಗಿಗಳು ಪರದಾಡುವಂತಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯದಲ್ಲಿ 162 ಡಯಾಲಿಸಿಸ್ ಕೇಂದ್ರಗಳಿದ್ದು, 900 ಹೆಚ್ಚಿನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 650 ಸಿಬ್ಬಂದಿಗೆ 2021ರ ಜೂನ್ ಮತ್ತು ಜುಲೈ ತಿಂಗಳ ಪೂರ್ಣ ವೇತನ ಪಾವತಿಸಿಲ್ಲ. ಆಗಸ್ಟ್ ತಿಂಗಳವರೆಗೂ ಇಎಸ್ಐ ಮತ್ತು ಪಿಎಫ್ ನೀಡಿಲ್ಲ. ಇದರೊಂದಿಗೆ ಸರ್ಕಾರದಿಂದ ಬರಬೇಕಾದ ವೇತನವೂ ಬಂದಿಲ್ಲ. 2021 ರಿಂದ 2022ರ ಜನವರಿವರೆಗೆ ಸರ್ಕಾರ ಪೂರ್ಣ ವೇತನ ಬಿಡುಗಡೆಗೊಳಿಸಿದರೂ, ಸಂಸ್ಥೆ ವೇತನ ಕಡಿತಗೊಳಿಸಿ ಸಿಬ್ಬಂದಿಗೆ ಕೇವಲ ₹14 ಸಾವಿರ ನೀಡಿದೆ ಎಂದು ಆರೋಪಿಸಿದರು.
ಸಮರ್ಪಕ ಕೆಲಸ ಮಾಡುತ್ತಿಲ್ಲ ಎಂದು ನೀಡಿದ್ದ ಬಿಆರ್ಎಸ್ ಸಂಸ್ಥೆ ಏಜೆನ್ಸಿಯನ್ನು ರದ್ದುಗೊಳಿಸಿ, ಸಂಜೀವಿನಿ ಸಂಸ್ಥೆಗೆ ನೀಡಲಾಗಿದೆ. ಈಗ ಸಂಸ್ಥೆಯವರು ವಿನಾಕಾರಣ ಸಿಬ್ಬಂದಿಯನ್ನು ದೂರದ ಸ್ಥಳಕ್ಕೆ ವರ್ಗಾವಣೆ ಮಾಡುತ್ತಿದ್ದು, ಹೋಗದವರನ್ನು ಕೆಲಸದಿಂದ ವಜಾ ಮಾಡುತಿದ್ದಾರೆ. ಸಂಸ್ಥೆಯಿಂದ ಕಳಪೆ ಗುಣಮಟ್ಟದ ಔಷಧಗಳನ್ನು ಮತ್ತು ಪರಿಕರಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ಡಯಾಲಿಸಿಸ್ ಕೇಂದ್ರದ ಮುಖ್ಯಸ್ಥೆ ರೆಜಿನ ತಿಳಿಸಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಹಾಗೂ ಸಂಸ್ಥೆಯವರು ಆಗಮಿಸಿ ಸಮಸ್ಯೆ ಆಲಿಸದ ಕಾರಣ, ಶುಕ್ರವಾರ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ಸಂಸ್ಥೆ ಕಾವ್ಯ, ರತ್ನ, ಪವಿತ್ರ, ರೂಪ ಪಾಲ್ಗೊಂಡಿದ್ದರು. ಇಂದಿನ ಬಂದ್ ಆಚರಣೆಯಿಂದಾಗಿ ಡಯಾಲಿಸಿಸ್ಗೆ ಒಳಗಾಗಬೇಕಾಗಿದ್ದ ರೋಗಿಗಳು ಪರದಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.