ADVERTISEMENT

ಸಂವಿಧಾನದ ಆಶಯಕ್ಕೆ ಧಕ್ಕೆ: ಆತಂಕ

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ: ಎಸ್.ಎಸ್.ಎಫ್ ಜಿಲ್ಲಾ ಸಮಿತಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 13:13 IST
Last Updated 29 ಜನವರಿ 2020, 13:13 IST
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ‘ಪ್ರಗತಿಪರ ಜನಾಂದೋಲನ ವೇದಿಕೆ’ಯಿಂದ ಮಡಿಕೇರಿಯ ಗಾಂಧಿ ಮಂಟಪದ ಬಳಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ‘ಪ್ರಗತಿಪರ ಜನಾಂದೋಲನ ವೇದಿಕೆ’ಯಿಂದ ಮಡಿಕೇರಿಯ ಗಾಂಧಿ ಮಂಟಪದ ಬಳಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ   

ಮಡಿಕೇರಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ‘ಪ್ರಗತಿಪರ ಜನಾಂದೋಲನ ವೇದಿಕೆ’ಯಿಂದ ಇಲ್ಲಿನ ಗಾಂಧಿ ಮಂಟಪದ ಬಳಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಗುರುವಾರ (ಜ.30) ಮಾನವ ಸರಪಳಿ ನಿರ್ಮಿಸಿ ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯವಾಗಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಶಾಸಕ ಸಿ.ಎಂ.ಇಬ್ರಾಹಿಂ, ಸಾಹಿತಿ ಬಾಲಸುಬ್ರಮಣ್ಯ ಕಂಜರ್ಪಣೆ ಭೇಟಿ ನೀಡಿ ನೈತಿಕ ಸ್ಥೈರ್ಯ ತುಂಬಿದರು.

ಹೋರಾಟದ ರೂಪುರೇಷೆಗಳ ಕುರಿತೂ ಅವರು ಚರ್ಚಿಸಿದರು. ಈ ಸತ್ಯಾಗ್ರಹ ಸ್ಥಳಕ್ಕೆ ಈ ಹಿಂದೆ ಮಾಜಿ ಸಚಿವ ಎಂ.ಸಿ.ನಾಣಯ್ಯ ಸಹ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ನೀಡಿದ್ದರು.

ADVERTISEMENT

ಬುಧವಾರ, ಎಸ್ಎಸ್ಎಫ್ ಜಿಲ್ಲಾ ಸಮಿತಿ ಪ್ರಮುಖರು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ಎಸ್ಎಸ್ಎಫ್ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಅಝೀಜ್‌ ಸಖಾಫಿ ಕೊಡ್ಲಿಪೇಟೆ ಮಾತನಾಡಿ, ‘ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುವ ಯಾವುದೇ ಅನ್ಯಾಯಗಳನ್ನು ಪ್ರತಿಭಟಿಸುವ ಮಂದಿಗೆ ನಮ್ಮ ಸಂಘಟನೆಯು ಸಂಪೂರ್ಣ ಬೆಂಬಲ ನೀಡಲಿದೆ’ ಎಂದರು.

‘ನಿರುದ್ಯೋಗ, ಬೆಲೆ ಏರಿಕೆಯಂತಹ ಆಡಳಿತಾತ್ಮಕ ವೈಫಲ್ಯ ಮರೆಮಾಚಿ ಸಮಾಜವನ್ನು ಒಡೆದು ಆಳುವ ಮನೋಭಾವವನ್ನು ಆಡಳಿತ ವ್ಯವಸ್ಥೆ ಪ್ರದರ್ಶಿಸುತ್ತಿದೆ’ ಎಂದು ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಮಾತನಾಡಿ, ‘ಸಿ.ಎ.ಎ ಮತ್ತು ಎನ್‌.ಆರ್‌.ಸಿ ಕಾಯ್ದೆಗಳು ಭಾರತದ ನೈಜ ಆಶಯಗಳಿಗೆ ವಿರುದ್ಧವಾಗಿವೆ. ಸಂವಿಧಾನ ವಿರೋಧಿ ಚಟುವಟಿಕೆಯನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು’ ಎಂದು ಕರೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಶಾಫಿ ಸಅದಿ ಮಾತನಾಡಿ, ‘ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಎಲ್ಲ ಭಾರತೀಯರು ಒಗ್ಗೂಡಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ತನ್ನೀರಾ ಮೈನಾ, ಮುನೀರ್‌, ಅಬ್ದುಲ್‌ ರಜಾಕ್‌, ಪ್ರಕಾಶ್‌ ಆಚಾರ್ಯ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಸುರೆಯಾ ಅಬ್ರಾರ್, ಮಿನಾಜ್‌ ಪ್ರವೀಣ್‌, ಪ್ರಗತಿಪರ ಜನಾಂದೋಲನ ವೇದಿಕೆ ಸಂಚಾಲಕ ಈ.ರಾ.ದುರ್ಗಾಪ್ರಸಾದ್, ಯಾಕೂಬ್‌, ಅಬ್ದುಲ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.