ADVERTISEMENT

ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಲು ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 11:55 IST
Last Updated 2 ಮಾರ್ಚ್ 2020, 11:55 IST
ನೆಲ್ಯಹುದಿಕೇರಿ ಗ್ರಾ.ಪಂ ಮುಂಭಾಗ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ನೆಲ್ಯಹುದಿಕೇರಿ ಗ್ರಾ.ಪಂ ಮುಂಭಾಗ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮದಲ್ಲಿರುವ ಆದಿವಾಸಿ ಕುಟುಂಬಗಳಿಗೆ ನಿವೇಶನ ಒದಗಿಸಬೇಕೆಂದು ನೆಲ್ಯಹುದಿಕೇರಿ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಗ್ರಾ.ಪಂ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಪಕ್ಷದ ಶಾಖಾ ಕಾರ್ಯದರ್ಶಿ ಪಿ.ಆರ್ ಭರತ್, ನೆಲ್ಯಹುದಿಕೇರಿ ಗ್ರಾಮದ ಬರಡಿ ವ್ಯಾಪ್ತಿಯಲ್ಲಿ ಆದಿವಾಸಿ ಕುಟುಂಬಗಳಿಗೆ ನಿವೇಶನಕ್ಕಾಗಿ 4.50 ಏಕರೆ ಜಾಗವನ್ನು ಮೀಸಲಿಡಲಾಗಿತ್ತು. ಆದರೆ, ಸ್ಥಳೀಯ ಪ್ರಭಾವಿಯೊಬ್ಬರು ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಆದಿವಾಸಿಗಳು ನದಿದಡ, ಲೈನ್ ಮನೆಗಳು, ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು, ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. 2002 ರಲ್ಲಿ ಮಳೆಗಾಲದ ಪ್ರವಾಹದಲ್ಲಿ ನದಿ ದಡದಲ್ಲಿ ಮನೆಕಟ್ಟಿಕೊಂಡಿದ್ದ ಆದಿವಾಸಿಗಳ ಮನೆಗಳು ಕುಸಿದಿತ್ತು. ಅಂದಿನ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಆದಿವಾಸಿಗಳಿಗೆ ಮೀಸಲಿರಿಸಿದ ಜಾಗದಲ್ಲಿ 11 ಕುಟುಂಬಗಳಿಗೆ ತಲಾ 2 ಸೆಂಟು ಜಾಗಗಳಂತೆ ಹಕ್ಕುಪತ್ರವನ್ನು ವಿತರಿಸಲಾಗಿತ್ತು. ಆದಿವಾಸಿಗಳಿಗೆ ಕಾಯ್ದಿರಿಸಿದ ಜಾಗದ ಒತ್ತುವರಿ ತೆರವುಗೊಳಿಸಿ ಆದಿವಾಸಿಗಳಿಗೆ ನಿವೇಶನ ನೀಡಬೇಕೆಂದು ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಆದಿವಾಸಿ ಕುಟುಂಬಗಳಿಗೆ ಶಾಶ್ವತ ನಿವೇಶನ ಕಲ್ಪಿಸದಿದ್ದರೆ, ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಸಂದರ್ಭ ಪ್ರಮುಖರಾದ ರವಿ, ಚಂದ್ರನ್, ರಾಜ, ಮಣಿ, ಬೋಜಿ ಸೇರಿದಂತೆ ಇನ್ನಿತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.