ADVERTISEMENT

ಮಳೆ: ಒಡೆದ ‌ಹೆಬ್ಬಾಲೆ ಶಾಲಾ ತಡೆಗೋಡೆ

ಜಿಲ್ಲೆಯಲ್ಲಿ ಇಂದು– ನಾಳೆ ಭಾರಿ ಮಳೆ ಸಾಧ್ಯತೆ: ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 8:26 IST
Last Updated 14 ಮೇ 2021, 8:26 IST
ಕುಶಾಲನಗರ ಸಮೀಪದ ಹೆಬ್ಬಾಲೆಯಲ್ಲಿ ಸುರಿದ ಭಾರಿ ಮಳೆಗೆ ಸರ್ಕಾರಿ ಪ್ರಾಥಮಿಕ ಶಾಲೆಯ ತಡೆಗೋಡೆ ಕುಸಿದಿರುವುದು
ಕುಶಾಲನಗರ ಸಮೀಪದ ಹೆಬ್ಬಾಲೆಯಲ್ಲಿ ಸುರಿದ ಭಾರಿ ಮಳೆಗೆ ಸರ್ಕಾರಿ ಪ್ರಾಥಮಿಕ ಶಾಲೆಯ ತಡೆಗೋಡೆ ಕುಸಿದಿರುವುದು   

ಮಡಿಕೇರಿ: ಕೊಡಗಿನಲ್ಲಿ ಶುಕ್ರವಾರ ಹಾಗೂ ಶನಿವಾರ ಭಾರಿ ಮಳೆ ಸುರಿಯುವ ಸಾಧ್ಯತೆಯಿದ್ದು ಜಿಲ್ಲೆಯ ಅಪಾಯಕಾರಿ ಸ್ಥಳದಲ್ಲಿ ನೆಲೆಸಿರುವ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಕೊಡಗಿನ ಸುಂಟಿಕೊಪ್ಪ, ಮಡಿಕೇರಿ, ಗೋಣಿಕೊಪ್ಪಲು, ನಾಪೋಕ್ಲು, ಕುಶಾಲನಗರ ಭಾಗದಲ್ಲಿ ಗುರುವಾರ ಸಂಜೆಯೂ ಧಾರಾಕಾರ ಮಳೆ ಸುರಿದಿದೆ.

ಧಾರಾಕಾರ ಮಳೆ

ADVERTISEMENT

ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಸುಮಾರು ಎರಡು ಗಂಟೆ ಕಾಲ ಧಾರಾಕಾರವಾಗಿ ಮಳೆ ಸುರಿಯಿತು.

ಹೆಬ್ಬಾಲೆ ವ್ಯಾಪ್ತಿಯಲ್ಲೂ ಜೋರಾಗಿ ಸುರಿದ ಮಳೆಯಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲೆಯ ತಡೆಗೋಡೆ ಕುಸಿದಿದೆ.

ಶಾಲೆಯ ಮೈದಾನ ತುಂಬ ಮಳೆ ನೀರು ತುಂಬಿ ನೀರಿನ‌ ಒತ್ತಡದಿಂದ ಮೈದಾನದ ಒಂದು ಭಾಗದ ತಡೆಗೋಡೆ ಕುಸಿದು ಬಿದ್ದಿದೆ. ತಗ್ಗು ಪ್ರದೇಶದ ಕೃಷಿ ಭೂಮಿಗಳು ಜಲಾವೃತಗೊಂಡ ದೃಶ್ಯ ಕಂಡು ಬಂತು. ಗ್ರಾಮದ ಕನಕ ಬ್ಲಾಕ್‌ನ ಲಕ್ಕಯ್ಯ ಹಾಗೂ ನಯನ ಅವರ ಮನೆಗೆ ಮನೆ ನೀರು ನುಗ್ಗಿ ಹಾನಿಯಾಗಿದೆ.

ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು.‌ ಸಂಜೆ ನಾಲ್ಕು ಗಂಟೆ ಸುಮಾರಿಗೆ ತುಂತುರು ಹನಿಗಳಿಂದ ಮಳೆ ಆರಂಭಗೊಂಡಿತು. ಆಗ ಗುಡುಗು ಮಿಂಚಿನ ಅರ್ಭಟ ಜೋರಾಗಿತ್ತು. ಲಾಕ್‌ಡೌನ್‌ನಿಂದಾಗಿ ಮನೆ ಒಳಗೆ ಬಂದಿಯಾಗಿದ್ದ ಜನರಿಗೆ ಮಳೆಯ ಅರ್ಭಟ ಆತಂಕ ಹುಟ್ಟಿಸಿತ್ತು.ಕೂಡುಮಂಗಳೂರು, ಗುಡ್ಡೆಹೊಸೂರು, ನಂಜರಾಯಪಟ್ಟಣ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸಿದ್ದಲಿಂಗಪುರ ಗ್ರಾಮಗಳ ಕೆಲಕಾಲ ಮಳೆ ಜೋರಾಗಿ ಸುರಿಯಿತು.

ಬಿರುಸಿನ ಮಳೆ

ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ‌ ಧಾರಾಕಾರವಾಗಿ ಮಳೆ ಸುರಿಯಿತು.

ಬೆಳಿಗ್ಗೆನಿಂದ‌ ಉರಿಬಿಸಿಲಿನಿಂದ‌ ಕೂಡಿದ್ದ ವಾತಾವರಣ ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಗುರುವಾರವೂ ಮುಂದುವರಿದಿದೆ.

ಸಂಜೆ 5 ಗಂಟೆ ಸುಮಾರಿಗೆ ಪಟ್ಟಣ ಕತ್ತಲೆಯಿಂದ ಆವರಿಸಿ ದಿಢೀರನೆ ಮಳೆ‌ ಸುರಿಯಿತು.

ಮಾದಾಪುರ, ಬಾಳೆಕಾಡು, ಕಾಂಡನಕೊಲ್ಲಿ, ಮತ್ತಿಕಾಡು, ಮಟತ್ ಕಾಡು, ಉಪ್ಪುತೋಡು ಸೇರಿದಂತೆ ಇತರೆಡೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.