ಮಡಿಕೇರಿ: 2018–19ನೇ ಸಾಲಿನಲ್ಲಿ ಪ್ರಕೃತಿ ವಿಕೋಪಕ್ಕೆ ಮನೆ ಕಳೆದುಕೊಂಡ ಮರಾಠಿ ಸಮುದಾಯದ ಸಂತ್ರಸ್ತರಿಗೆ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದಿಂದ ಧನಸಹಾಯ ನೀಡಲು ಸಂಘದ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ 5ನೇ ಮಾಸಿಕ ಸಭೆಯಲ್ಲಿ ಸದಸ್ಯರ ಅನುಮತಿ ಮೇರೆಗೆ ತೀರ್ಮಾನ ಕೈಗೊಳ್ಳಲಾಯಿತು.
ಪರಮೇಶ್ವರ್ ಮಾತನಾಡಿ, ಬೆಟ್ಟಗಳು ಕುಸಿದು ಹಾಗೂ ನದಿ ಪ್ರವಾಹದಿಂದ ನಷ್ಟಗೊಳಗಾದ ಎಲ್ಲರಿಗೂ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಭೆಯಲ್ಲಿ ಗುರುತಿಸಲಾಗಿರುವ ಸಂತ್ರಸ್ತರು ಅ. 13ರಂದು ಸಂಘದ ಕಚೇರಿಯಲ್ಲಿ ನಡೆಯುವ ಮಾಸಿಕ ಸಭೆಯಲ್ಲಿ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು.
ಮರಾಠಿ ಬಾಂಧವರು ಸಂಘದ ಸದಸ್ಯತ್ವ ಪಡೆದು ವಿವಿಧ ಸೌಲಭಗಳನ್ನು ಪಡೆದುಕೊಳ್ಳಬೇಕು ಎಂದೂ ಕೋರಿದರು.
ಸಂಘದ ಸ್ಥಾಪಕ ಕಾರ್ಯದರ್ಶಿ ಎಂ.ಎಸ್. ಮಂಜುನಾಥ್ ಮಾತನಾಡಿ, ನೈಜ್ಯ ಸಂತ್ರಸ್ತರನ್ನು ಗುರುತಿಸಿ, ಪಟ್ಟಿ ಸಿದ್ಧಪಡಿಸಬೇಕು. ನಂತರ, ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಎಂದು ವಿಂಗಡಿಸಿ ಸಂಘದಿಂದ ಧನಸಹಾಯ ನೀಡುವಂತಾಗಲಿ ಎಂದು ಸಲಹೆ ನೀಡಿದರು.
ಸಂಘದ ಕಾರ್ಯದರ್ಶಿ ಪವನ್ ಕುಮಾರ್ ಮಾತನಾಡಿ, ಈಗಾಗಲೇ ಸಂಘದ ಪದಾಧಿಕಾರಿಗಳು ಜಿಲ್ಲೆಯ ಕಟ್ಟೆಮಾಡು ಪರಂಬು ಪೈಸಾರಿ, ವಾಲ್ನೂರು, ಸಿದ್ದಾಪುರ, ಕರಡಿಗೋಡು, ನೆಲ್ಯಹುದಿಕೇರಿ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ. ಸದಸ್ಯತ್ವಕ್ಕೆ ಕರಡು ಪಟ್ಟಿ ತಯಾರಿಸಲಾಗಿದ್ದು, ಸುಮಾರು 15 ಮನೆಗಳು ಸಂರ್ಪೂಣ ಹಾನಿ, 20 ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಜನಾಂಗ ಬಾಂಧವರು ಸಂಪೂರ್ಣ ಮನೆ ಕಳೆದುಕೊಂಡವರು ಬಾಕಿಯಾಗಿದ್ದಲ್ಲಿ ಮಡಿಕೇರಿಯ ತಾಳತ್ತ್ಮನೆಯಲ್ಲಿರುವ ಸಂಘದ ಕಚೇರಿಗೆ ಪತ್ರ ಬರೆದು ತಿಳಿಸಬಹುದು. ಮಾಹಿತಿಗೆ ಮೊಬೈಲ್: 94809 87870 ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್.ನಾಯ್ಕ್, ಅಂಭಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಎಸ್.ದಿವ್ಯಕುಮಾರ್, ಉಪಾಧ್ಯಕ್ಷ ಎಂ.ಎಸ್.ಗಣೇಶ್, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್.ಯೋಗೇಂದ್ರ, ಪ್ರಮುಖರಾದ ಗುರುವಪ್ಪ, ನರಸಿಂಹ, ರತ್ನಮಂಜರಿ, ಯುವ ವೇದಿಕೆ ಸದಸ್ಯರಾದ ಸತೀಶ್, ಹೂವಮ್ಮ, ಸುರೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.