ADVERTISEMENT

ಮಡಿಕೇರಿ: ದಂಪತಿ ಕಟ್ಟಿ ಹಾಕಿ ದರೋಡೆ

ಪೊಲೀಸರಿಂದ ವ್ಯಾಪಕ ಶೋಧ; ಸಿಗದ ಸುಳಿವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 16:36 IST
Last Updated 9 ಜೂನ್ 2022, 16:36 IST

ಸಿದ್ದಾಪುರ: ಇಲ್ಲಿಗೆ ಸಮೀಪದ ಮಲ್ದಾರೆ ಯಲ್ಲಿ ಬುಧವಾರ ರಾತ್ರಿ ದಂಪತಿ ಕಟ್ಟಿ ಹಾಕಿದ ಮೂವರು ಚಿನ್ನಾಭರಣ ಮತ್ತು ನಗದನ್ನು ದರೋಡೆ ಮಾಡಿಪರಾರಿಯಾಗಿದ್ದಾರೆ.

ಮಾಲ್ದಾರೆಯ ಕುಡ್ಲೂರು (ಬಾಡಗ) ತಂಗಪ್ಪಣ್ಣ–ಜಾನಕಿ ದಂಪತಿ ರಾತ್ರಿ 9 ಗಂಟೆಗೆ ಊಟ ಮುಗಿಸುತ್ತಿದ್ದಂತೆ, ಹಿಂಬದಿಯ ಬಾಗಿಲ ಮೂಲಕ ಬಂದ ಮೂವರು ಮುಸುಕುಧಾರಿಗಳು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ. ಮನೆಯ ಕೋಣೆಯೊಂದರಲ್ಲಿ ಇಬ್ಬರನ್ನೂ ಕೂಡಿ ಹಾಕಿದ ದುಷ್ಕರ್ಮಿಗಳು ಬಾಯಿಗೆ ಬಟ್ಟೆ ತುರುಕಿದ್ದಾರೆ.

ಮನೆಯಲ್ಲಿದ್ದ ₹ 2 ಲಕ್ಷ ಹಣವನ್ನು ದೋಚಿದ ಅವರು, ತೆರಳುವಾಗ ಜಾನಕಿ ಅವರ ಕುತ್ತಿಗೆಗೆ ಕೈಹಾಕಿ ಸರವನ್ನು ಎಳೆದಿದ್ದಾರೆ. ಅರ್ಧಭಾಗ ಸರ ಮಾತ್ರ ದುಷ್ಕರ್ಮಿಗಳ ಕೈಸೇರಿದೆ. ದರೋಡೆಕೋರರು ಹಿಂದಿ ಹಾಗೂ ಕನ್ನಡದಲ್ಲಿ ಮಾತನಾಡುತ್ತಿದ್ದರು. ಹಿಂದಿನ ಬಾಗಿಲ ಮೂಲಕವೇ ಅವರು ತೆರಳಿದರು.ದರೋಡೆಕೋರರಲ್ಲಿ ಒಬ್ಬಾತ ತೀರ ದಪ್ಪಗೆ ಇದ್ದ, ಎಲ್ಲರೂ ಮಾರಕಾಸ್ತ್ರ ಹಿಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ದರೋಡೆಕೋರರು ಹೋದ ನಂತರ ಕಿಟಕಿ ಮೂಲಕ ದಂಪತಿ ಕೂಗಿದ್ದಾರೆ. ಪಕ್ಕದ ಮನೆಯವರು ಬಂದು ಬಾಗಿಲು ತೆರೆದು ಕಟ್ಟಿದ್ದ ಕಟ್ಟುಗಳನ್ನು ಬಿಚ್ಚಿದ್ದಾರೆ. ಸಮೀಪದಲ್ಲೇ ವಾಹನವೊಂದರ ಶಬ್ದ ಕೇಳಿ ಬಂದಿದ್ದು, ಬಹುಶಃ ಯಾವುದೋ ವಾಹನದಲ್ಲಿ ದುಷ್ಕರ್ಮಿಗಳು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಬಂದು ಕೂಲಂಕಷವಾಗಿ ಪರಿಶೀಲನೆ ನಡೆಸಿತು.

ಘಟನಾ ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಇನ್‌ಸ್ಪೆಕ್ಟರ್ ವೆಂಕಟೇಶ್, ಸಬ್‌ಇನ್‌ಸ್ಪೆಕ್ಟರ್ ಮೋಹನ್ ರಾಜ್ ಭೇಟಿ ನೀಡಿದರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.