ಗೋಣಿಕೊಪ್ಪಲು: ಗೋಣಿಕೊಪ್ಪಲು ಪಟ್ಟಣದ ಸುತ್ತಮುತ್ತ ಉಗ್ರರು ಇರುವ ಶಂಕೆ ವ್ಯಕ್ತಗೊಂಡಿದೆ. ಇಂತಹ ವಾತಾವರಣವನ್ನು ತೊಡೆದು ಹಾಕಲು ಆರ್ಎಸ್ಎಸ್ ಯುವಕರು ಪಣತೊಡಬೇಕು ಎಂದು ಆರ್ಎಸ್ಎಸ್ ಜಿಲ್ಲಾ ಘಟಕದ ಸಂಚಾಲಕ ಚಕ್ಕೇರ ಮನು ಕಾವೇರಪ್ಪ ಸಲಹೆ ನೀಡಿದರು.
ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಪಟ್ಟಣದಲ್ಲಿ ಬುಧವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ್ರೋಹಿ ಚಟುವಟಿಕೆಯ ವಿರುದ್ಧ ಜಾಗೃತರಾಗದಿದ್ದರೆ ದೇಶಕ್ಕೆ ಅಪಾಯ ಸಂಭವಿಸಲಿದೆ. ಕಾರ್ಯ ಕರ್ತರು ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಬೇಕು. ದೇಶಭಕ್ತರು ಜಾಗೃತ ರಾದರೆ ಮಾತ್ರ ದೇಶದ ಉಳಿವು ಸಾಧ್ಯ. ಈ ಕಾರಣಕ್ಕೆ ಎಲ್ಲರೂ ಯೋಧರಾಗಬೇಕು ಎಂದು ಅವರು ನುಡಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಮಾತನಾಡಿ, ‘ಅಸ್ಸಾಂ ರಾಜ್ಯದ ಮುಖವಾಡ ಹೊತ್ತು ಜಿಲ್ಲೆಗೆ ವಲಸಿಗರಾಗಿ ಬಂದಿರುವ ಬಾಂಗ್ಲಾ ದೇಶದ ಕಾರ್ಮಿಕರ ಬಗ್ಗೆ ಜಾಗೃತರಾಗಿರಬೇಕು. ಇಲ್ಲದಿದ್ದರೆ ದೇಶ ವಿರೋಧಿ ಚಟುವಟಿಕೆ ನಡೆಯಲು ಇಲ್ಲಿನ ಜನರೇ ಅವಕಾಶ ಕಲ್ಪಿಸಿದಂತಾಗುತ್ತದೆ. ಕಾರ್ಮಿಕರ ಕೊರತೆ ಇದೆ ಎಂದು ಬಾಂಗ್ಲಾ ದೇಶದ ವಲಸಿಗರನ್ನು ಗೊತ್ತು ಗುರಿಯಿಲ್ಲದೆ ಕೆಲಸಕ್ಕೆ ನೇಮಿಸಿಕೊಳ್ಳುವುದು ಬೇಡ’ ಎಂದು ಸಲಹೆ ನೀಡಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಮಾತನಾಡಿ, ‘ಶಾಂತಿ ನಾಡಿನಲ್ಲಿ ಉಗ್ರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ಕೊಣಿಯಂಡ ಬೋಜಮ್ಮ, ಭಜರಂಗ ದಳದ ತಾಲ್ಲೂಕು ಘಟಕದ ಸಂಚಾಲಕ ಪ್ರವೀಣ್, ಪ್ರಮುಖರಾದ ಸುರೇಶ್ ರೈ, ಕಿಲನ್ ಗಣಪತಿ, ಮುದ್ದಿಯಡ ಮಂಜು, ಸುಬ್ರಮಣಿ, ಗಣೇಶ್, ರಾಜೇಶ್, ಸುವೀನ್ ಗಣಪತಿ, ಚೆಪ್ಪುಡೀರ ಮಾಚು, ಕುಲ್ಲಚಂಡ ಚಿಣ್ಣಪ್ಪ, ಲಾಲಾ ಭೀಮಯ್ಯ, ಕಾವ್ಯಾ ಮಧು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.