ಗೋಣಿಕೊಪ್ಪಲು: ಮಳೆಗಾಲದಲ್ಲಿ ಮೈದುಂಬಿ ಹರಿಯುವ ಲಕ್ಷ್ಮಣತೀರ್ಥ ನದಿ ಇದೀಗ ಕಾಲುವೆಯಂತೆ ಕಾಣುತ್ತಿದೆ. ನದಿ ಒಡಲಿನಲ್ಲಿ ಮರಳು ರಾಶಿ ಎದ್ದು ಕಾಣುತ್ತದೆ.
ಶ್ರೀಮಂಗಲ ಬಳಿಯ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ಕಾನೂರು ಬಳಿ ವಿಶಾಲವಾಗಿ ಹರಿಯುತ್ತದೆ. ನದಿಯ ಎಡಬಲದಲ್ಲಿರುವ ಗದ್ದೆ ಬಯಲಿನ ಸುಮಾರು 2-3 ಕಿಮೀ ದೂರ ಆವರಿಸುತ್ತದೆ. ಕೆಲವು ಕಡೆ ರಸ್ತೆ ಹಾಗೂ ಸೇತುವೆಗಳು ನೀರಿನಲ್ಲಿ ಮುಳುಗಿ ಸಂಚಾರ ಸಂಪರ್ಕ ಕಡಿದು ಹೋಗುತ್ತದೆ.
ಮಳೆಗಾದಲ್ಲಿ ನದಿಯ ವೈಭವ ನೋಡಿದ ಜನತೆ ಇದೀಗ ಒಣಗಿದ ದೃಶ್ಯ ನೋಡಿ ‘ಅಯ್ಯೋ’ ಎಂಬ ಉದ್ಗಾರ ತೆಗೆಯುವಂತಾಗಿದೆ. ಬ್ರಹ್ಮಗಿರಿ ಪರ್ವತದ ತಪ್ಪಲಿನಲ್ಲಿ ಉತ್ತಮ ಮಳೆ ಬಿದ್ದಾಗ ನದಿ ನೀರು ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ನೀರು ಕ್ಷೀಣಿಸುತ್ತದೆ. ಆದರೆ, ನದಿ ಮೂಲವಾದ ಇರ್ಪು ಜಲಪಾತ ಮಾತ್ರ ಎಂದಿಗೂ ಬತ್ತುವುದಿಲ್ಲ. ಸಣ್ಣ ಪ್ರಮಾಣದಲ್ಲಿಯಾದರೂ ನೀರು ಧುಮ್ಮಿಕ್ಕುತ್ತಿರುತ್ತದೆ.
ಕುರ್ಚಿ ಗ್ರಾಮದಿಂದ ಕೊಡಗಿನ ಗಡಿ ನಿಟ್ಟೂರು ಜಾಗಲೆವರೆಗೂ ನದಿಯ ಎಡ ಬಲದಲ್ಲಿ ಕಾಫಿ ತೋಟಗಳಿವೆ. ಹೀಗಾಗಿ ಬೆಳೆಗಾರರು ಬೇಸಿಗೆಯಲ್ಲಿ ಕಾಫಿ ಹೂ ಅರಳಿಸಲು ನದಿ ನೀರನ್ನು ಬಳಸಿಕೊಳ್ಳುತ್ತಾರೆ. ಕೆಲವು ಕಡೆ ಹರಿಯುವ ನೀರನ್ನು ತಡೆಗಟ್ಟಿ ಅಲ್ಲಿಂದ ನೀರು ತೆಗೆಯುತ್ತಿದ್ದಾರೆ. ಮಾರ್ಚ್ ಕಳೆದ ಬಳಿಕ ಮಳೆ ಬಿದ್ದರೆ ಮತ್ತೆ ನದಿ ಜೀವಕಳೆ ಪಡೆದುಕೊಳ್ಳುತ್ತದೆ. ಈ ವೇಳೆಗೆ ಕಾಫಿ ಬೆಳೆಗಾರರು ನೀರು ಹಾಯಿಸುವುದನ್ನು ನಿಲ್ಲಿಸುತ್ತಾರೆ. ಕಾನೂರು ಬಳಿ ನದಿ ಪಾತ್ರ ಸಣ್ಣ ಕಾಲುವೆಯಂತೆ ಕಂಡು ಬಂದರೆ, ಬಾಳೆಲೆ ನಿಟ್ಟೂರು ಬಳಿ ಸಂಪೂರ್ಣ ಒಣಗಿದ್ದು, ಕೇವಲ ಮರಳು ರಾಶಿ ಕಂಡು ಬರುತ್ತಿದೆ. ಪ್ರವಾಸಿಗರಿಗೆ ಮಾತ್ರ ನಿರಾಸೆ ಉಂಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.