ಕುಶಾಲ ನಗರದ ವಿದ್ಯಾರ್ಥಿನಿ ತೇಜಸ್ವಿನಿ ದ್ವಿತೀಯ ವಾಣಿಜ್ಯ ವಿಭಾದಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದು, ತಾಯಿ ಸುಜಾತಾ ಸಿಹಿ ತಿನ್ನಿಸಿದರು.
ಮಡಿಕೇರಿ: ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ಕಳೆದ ಬಾರಿ ರಾಜ್ಯದಲ್ಲಿ 5ನೇ ಸ್ಥಾನ ಪಡೆದಿದ್ದ ಕೊಡಗು ಜಿಲ್ಲೆ ಈ ಬಾರಿ 4ನೇ ಸ್ಥಾನಕ್ಕೆ ಏರಿದ್ದು, ಉತ್ತಮ ಫಲಿತಾಂಶ ದಾಖಲಿಸಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಬೆಂಗಳೂರು ದಕ್ಷಿಣ ಕ್ರಮವಾಗಿ ಮೊದಲ 3 ಸ್ಥಾನಗಳಲ್ಲಿದ್ದು, ನಂತರದ ಸ್ಥಾನವನ್ನು ಕಾಫಿ ನಾಡು ಪಡೆದಿದೆ.
ಒಟ್ಟು ಶೇ 83.84ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕೊಡಗು ಜಿಲ್ಲೆಗೆ ಪಿಯು ಫಲಿತಾಂಶದಲ್ಲಿ ರಾಜ್ಯದಲ್ಲೇ ಮೊದಲ 5ರೊಳಗಿನ ಸ್ಥಾನ ಪಡೆಯುವಂತೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು 4,697 ವಿದ್ಯಾರ್ಥಿಗಳ ಪೈಕಿ, 3,938 ಮಂದಿ ತೇರ್ಗಡೆಯಾಗಿದ್ದಾರೆ. 250 ಖಾಸಗಿ ಅಭ್ಯರ್ಥಿಗಳ ಪೈಕಿ 121 (ಶೇ 48.40) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 121 ಪುನರಾವರ್ತಿತ ಅಭ್ಯರ್ಥಿಗಳ ಪೈಕಿ 24 (ಶೇ 19.83) ವಿದ್ಯಾರ್ಥಿಗಳಷ್ಟೇ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಮಡಿಕೇರಿ ಸಂತ ಜೊಸೆಫರ ಪಿಯು ಕಾಲೇಜಿನ ಬಿ.ಎಂ. ಅಫಿಯಾ ಶರೀಫ್ 572 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಕುಶಾಲನಗರ ಕನ್ನಡ ಭಾರತಿ ಪಿಯು ಕಾಲೇಜಿನ ಎಂ.ಆರ್. ನವನಿಧನ್ 569 ಅಂಕ ಪಡೆದು ದ್ವಿತೀಯ, ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಸ್.ಸಾಜೀಧಾ 569 ಅಂಕ ಪಡೆದು ದ್ವಿತೀಯ, ಮದೆ ಮಹೇಶ್ವರ ಪಿಯು ಕಾಲೇಜಿನ ಕೆ.ಮೇಘಶ್ರೀ 568 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸುಂಟಿಕೊಪ್ಪದ ಸಂತ ಮೇರಿ ಸಂಯುಕ್ತ ಪಿಯು ಕಾಲೇಜಿನ ಸಿ.ಎಂ. ಡಿಂಪಲ್ ತಿಮ್ಮಯ್ಯ 591 ಅಂಕ ಪಡೆದು ಪ್ರಥಮ ಸ್ಥಾನ. ಗೋಣಿಕೊಪ್ಪಲುವಿನ ವಿದ್ಯಾನಿಕೇತನ್ ಪಿಯು ಕಾಲೇಜಿನ ಕೆ.ಎಸ್. ಶಿವಾನಿ 590 ಅಂಕ ಪಡೆದು ದ್ವಿತೀಯ ಸ್ಥಾನ, ವಿ.ಎಸ್. ನೀಕ್ಷಾ 587 ಅಂಕ ಪಡೆದು ತೃತೀಯ ಸ್ಥಾನ, ಸುಂಟಿಕೊಪ್ಪ ಸಂತ ಮೇರಿ ಸಂಯುಕ್ತ ಪಿಯು ಕಾಲೇಜಿನ ಡಿ.ಡಿ.ಸೃಜನ 587 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪಲುವಿನ ವಿದ್ಯಾನಿಕೇತನ್ ಪಿಯು ಕಾಲೇಜಿನ ಟಿ.ವಿ.ವೈಷ್ಣವಿ 588 ಅಂಕ ಪಡೆದು ಪ್ರಥಮ ಸ್ಥಾನ, ಪೊನ್ನಂಪೇಟೆಯ ಕೂರ್ಗ್ ಪಿಯು ಕಾಲೇಜಿನ ಎ.ಆರ್. ಪನ್ಯಪೊನ್ನಮ್ಮ 586 ಅಂಕ ಪಡೆದು ದ್ವಿತೀಯ, ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಪಿಯು ಕಾಲೇಜಿನ ಲಿಜೋ ಜೆಮ್ಸ್ 583 ಅಂಕ ಪಡೆದು ತೃತೀಯ, ಎಂ.ಪಿ. ಮಮತಾ 583 ಅಂಕ ಪಡೆದು ತೃತೀಯ, ಗೋಣಿಕೊಪ್ಪಲುವಿನ ವಿದ್ಯಾನಿಕೇತನ್ ಪಿಯು ಕಾಲೇಜಿನ ಪಿ.ಸಾನಿಕ ಜಸ್ಮಿನ್ 583 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಕೊಡಗು ಜಿಲ್ಲೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 2,320 ಬಾಲಕರ ಪೈಕಿ 1,750 ಬಾಲಕರು ಉತ್ತೀರ್ಣರಾಗಿ ಶೇ 75.43 ರಷ್ಟು ಫಲಿತಾಂಶ ಪಡೆದಿದ್ದಾರೆ. ಹಾಗೆಯೇ ಪರೀಕ್ಷೆ ಬರೆದ 2,748 ಬಾಲಕಿಯರ ಪೈಕಿ 2,333 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ 84.9ರಷ್ಟು ಫಲಿತಾಂಶ ಪಡೆದಿದ್ದಾರೆ.
ಈ ಬಾರಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಿಂತ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 1,535 ವಿದ್ಯಾರ್ಥಿಗಳ ಪೈಕಿ 1,395 ಮಂದಿ ಪಾಸಾಗಿ ಶೇ 90.88 ಫಲಿತಾಂಶ ದಾಖಲಿಸಿದರು.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 2,376 ವಿದ್ಯಾರ್ಥಿಗಳ ಪೈಕಿ 2,027 ಮಂದಿ ಪಾಸಾಗಿ ಶೇ 85.31 ಫಲಿತಾಂಶ ಪಡೆದು 2ನೇ ಸ್ಥಾನ ಪಡೆದರು.
ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 786 ವಿದ್ಯಾರ್ಥಿಗಳ ಪೈಕಿ 516 ಮಂದಿ ಪಾಸಾಗಿ ಶೇ 65.65 ಫಲಿತಾಂಶವನ್ನಷ್ಟೇ ದಾಖಲಿಸಿದರು.
ಕುಶಾಲನಗರ: ಸಮೀಪದ ಕೊಪ್ಪ ಭಾರತ ಮಾತಾ ಪಿಯು ಕಾಲೇಜಿನ ವಿದ್ಯಾರ್ಥಿನಿ ತೇಜಸ್ವಿನಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 598 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ
ಪಡೆದಿದ್ದಾರೆ.
ಇಲ್ಲಿನ ಆದಿಶಂಕರಾಚಾರ್ಯ ಬಡಾವಣೆಯ ನಿವಾಸಿ ಅರಣ್ಯ ಇಲಾಖೆಯ ಅಧಿಕಾರಿ ಎಂ.ಎ. ಆನಂದ ಮತ್ತು ಸುಜಾತಾ ದಂಪತಿಯ ಪುತ್ರಿಯಾಗಿದ್ದು, ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಹಾಗೂ ಕುಶಾಲನಗರ ಪಟ್ಟಣಕ್ಕೆ ಹೆಸರು ತಂದಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.