ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ಟಿ.ಶೆಟ್ಟಿಗೇರಿಯ ಎಂ.ಯು. ಪಾರ್ವತಿ (ಕೈಬುಲಿರ ಪಾರ್ವತಿತಿ ಬೋಪಯ್ಯ) ಅವರಿಗೆ ರಾಜ್ಯ ಸರ್ಕಾರದ ಹಿರಿಯ ನಾಗರಿಕರ ಪ್ರಶಸ್ತಿ ಲಭಿಸಿದೆ.
ಅ 10ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರ ಸಮಾಜ ಸೇವೆಗಾಗಿ ನೀಡುವ ಹಿರಿಯ ನಾಗರಿಕ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಆರೋಗ್ಯ ಇಲಾಖೆ ನಿವೃತ್ತ ನೌಕರರಾಗಿದ್ದ ಪಾರ್ವತಿ ಬೋಪಯ್ಯ ತಮ್ಮ ಮತ್ತು ಸೇನೆಯಲ್ಲಿದ್ದ ಪತಿಯ ಪಿಂಚಣಿ ಎರಡನ್ನೂ ಸಮಾಜ ಸೇವೆಗೆ ಬಳಸುತ್ತಿದ್ದರು. 85ರ ಹರೆಯದ ಪಾರ್ವತಿ ಬೋಪಯ್ಯ ಮಾಜಿ ಸೈನಿಕರ ಸಂಘ ಸಂಸ್ಥೆ, ಕೋವಿಡ್ ಮತ್ತು ಜಿಲ್ಲೆಯಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಮನೆ ಮಠ ಕಳೆದುಕೊಂಡವರಿಗೂ ನೆರವಾಗಿದ್ದರು. ಕೊಡವ ಭಾಷಾ ಸಾಹಿತ್ಯದ ಕಾರ್ಯಕ್ರಮಗಳಿಗೆ ತಮ್ಮ ಕೈಲಾದ ನೆರವು ನೀಡುತ್ತಾ ಬಂದಿದ್ದಾರೆ.
ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘ, ಟಿ. ಶೆಟ್ಟಿಗೇರಿ ಕೊಡವ ಸಮಾಜ, ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಪದಾಧಿಕಾರಿಗಳು ಪಾರ್ವತಿ ಬೋಪಯ್ಯ ಅವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.