ADVERTISEMENT

ಸುಂಟಿಕೊಪ್ಪದ ಬಾಲಪ್ರತಿಭೆ ವಾಗ್ಮಿ ಶ್ರೀಶಾ

ಕಾರ್ಯಕ್ರಮಗಳಲ್ಲಿ ಪ್ರಧಾನ ಭಾಷಣ ಮಾಡಲು ಆಹ್ವಾನ; ಜನರಿಂದ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 8:50 IST
Last Updated 14 ನವೆಂಬರ್ 2022, 8:50 IST
ಸುಂಟಿಕೊಪ್ಪದ ಬಾಲ ಪ್ರತಿಭೆ, ವಾಗ್ಮಿ ಶ್ರೀಶಾ ಅವರು 4ನೇ ತರಗತಿ ಓದುತ್ತಿದ್ದ ವೇಳೆ ಸ್ವಾತಂತ್ರ್ಯ ದಿನದ ಅಂಗವಾಗಿ ಭಾಷಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಳು
ಸುಂಟಿಕೊಪ್ಪದ ಬಾಲ ಪ್ರತಿಭೆ, ವಾಗ್ಮಿ ಶ್ರೀಶಾ ಅವರು 4ನೇ ತರಗತಿ ಓದುತ್ತಿದ್ದ ವೇಳೆ ಸ್ವಾತಂತ್ರ್ಯ ದಿನದ ಅಂಗವಾಗಿ ಭಾಷಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಳು   

ಸುಂಟಿಕೊಪ್ಪ: ವೇದಿಕೆ ಮೇಲೆ ನಿಂತು ಮಾತನಾಡಿದರೆ‌‌ ಮೈ ರೋಮಾಂಚನ, ಪೆನ್ಸಿಲ್ ಹಿಡಿದು ಕುಳಿತರೆ ಆಕರ್ಷಕವಾದ ಚಿತ್ರ, ಹಾಡಿಗೂ ಸೈ, ಆಟಕ್ಕೂ‌ ಸೈ ಅನ್ನುವ ಅಪರೂಪ ಬಾಲ ಪ್ರತಿಭೆ, ವಾಗ್ಮಿ 7ನೇ ತರಗತಿಯ ಶ್ರೀಶಾ.

ಟೈಲರ್ ವೃತ್ತಿ ಮಾಡುತ್ತಿರುವ ಎ.ಕೆ.ಶ್ರೀಜಾ ಮತ್ತು ಗ್ರಂಥಾಲಯ ಸಹಾಯಕಿಯಾಗಿರುವ ಕೆ.ಎಸ್.ಸಂಧ್ಯಾ ದಂಪತಿ ಪುತ್ರಿ ಶ್ರೀಶಾ ಸಣ್ಣ ವಯಸ್ಸಿನಲ್ಲಿಯೇ ಹಲವು ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಳು.

ಸಂತ ಅಂತೋಣಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾಗಲೇ ಭಾಷಣವನ್ನು ತನ್ನ ಹವ್ಯಾಸವನ್ನಾಗಿ ರೂಢಿಸಿಕೊಂಡಿದ್ದಳು. ಯೂಟ್ಯೂಬ್‌ಗಳಲ್ಲಿ ಬರುವ ಪ್ರಸಿದ್ಧ ಭಾಷಣಕಾರರ ಮಾತುಗಳನ್ನು ಆಲಿಸಿ ತಾನು ಒಬ್ಬ ಭಾಷಣಕಾರಳಾಗಬೇಕು ಎಂದು ಹಂಬಲಿಸಿದಳು. ತಾಯಿ, ತಂದೆ ಸಂಪೂರ್ಣ ಬೆಂಬಲ ನೀಡಿ ಆಕೆಯನ್ನು ಹುರಿದುಂಬಿಸಿದರು. ಕರ್ನಾಟಕ ರಾಜ್ಯೋತ್ಸವ, ಯೋಧರ ದಿನ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ 80ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಮುಖ್ಯ ಭಾಷಣಕಾರಳಾಗಿ ಭಾಗವಹಿಸಿ ಜನ ಮನ್ನಣೆ ಗಳಿಸಿದ್ದಾಳೆ.

ADVERTISEMENT

6ನೇ ತರಗತಿ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆದು ಭಾಷಣ, ಚಿತ್ರಕಲೆ ಮೂಲಕ ಮಿಂಚುತ್ತಿದ್ದಾಳೆ. ಶ್ರೀಶಾ ಅವರ ಮಾತುಗಳನ್ನು ಆಲಿಸಿದ್ದ ಅಂದಿನ‌ ಜಿಲ್ಲಾಧಿಕಾರಿ ಚಾರುಲತಾಸೋಮಲ್ ಅವರು ಕಚೇರಿಗೆ ಕರೆಸಿ ಭಾಷಣ ಮಾಡಿಸಿ ಸನ್ಮಾನವನ್ನೂ ಮಾಡಿದ್ದರು.

ಈಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಯ ಭಾಷಣ ಸ್ಪರ್ಧೆಯಲ್ಲಿ ಜಯಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅದೇ ರೀತಿ ಅಭಿನಯ ಗೀತೆಯಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಬೆಂಗಳೂರಿನಲ್ಲಿ ನಡೆದ ‘ಯೋಧ ಮಿತ್ರ’ ಆಯೋಜಿತ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಮಡಿಕೇರಿ ರೋಟರಿ ಮಿಸ್ಟ್ ಹಿಲ್ಸ್ ಸಂಸ್ಥೆ ‘ಬಾಲ ಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀಶಾಳ ಜನ್ಮದಿನ ಜ.4 ಆಗಿದ್ದರೂ 2020ರ ಫೆ.14ರಿಂದ ಪುಲ್ವಾಮಾ ದಲ್ಲಿ ಹುತಾತ್ಮರಾದ ಯೋಧರನ್ನು ನೆನೆಯುತ್ತಾ ‘ಮತ್ತೆ ಹುಟ್ಟಿ ಬನ್ನಿ ಯೋಧರೆ’ ಎಂಬ ಕಾರ್ಯಕ್ರಮದ ಮೂಲಕ ಜನ್ಮದಿನ ಆಚರಿಸಿಕೊಳ್ಳು ವುದು ವಿಶೇಷ. ಜನಸೇವಾ ಟ್ರಸ್ಟ್‌ನ ‘ಜೀವನದಾರಿ’ ಅನಾಥಾಶ್ರಮದ ಹಿರಿಯರೊಂದಿಗೆ ಆಚರಿಸುತ್ತಿದ್ದಾಳೆ. ನೃತ್ಯದಲ್ಲೂ‌ ತೊಡಗಿಸಿಕೊಂಡು ಬಾಲಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.