ADVERTISEMENT

ಪೊಲೀಸ್ ಗಸ್ತು ವ್ಯವಸ್ಥೆ ಸುಧಾರಣೆಗೆ ‘ತಂತ್ರಾಂಶ’

‘ಸುಬಾಹು ಇ-ಬೀಟ್’ ಸೇವೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 13:44 IST
Last Updated 28 ಫೆಬ್ರುವರಿ 2020, 13:44 IST
ಪೊಲೀಸ್‌ ಬೀಟ್‌ ವ್ಯವಸ್ಥೆ ಸುಧಾರಣೆಗೆ, ‘ಸುಬಾಹು ಇ ಬೀಟ್‌’ ಸೇವೆಗೆ ಶುಕ್ರವಾರ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಚಾಲನೆ ನೀಡಿದರು
ಪೊಲೀಸ್‌ ಬೀಟ್‌ ವ್ಯವಸ್ಥೆ ಸುಧಾರಣೆಗೆ, ‘ಸುಬಾಹು ಇ ಬೀಟ್‌’ ಸೇವೆಗೆ ಶುಕ್ರವಾರ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌ ಚಾಲನೆ ನೀಡಿದರು   

ಮಡಿಕೇರಿ: ಜಿಲ್ಲೆಯಲ್ಲಿ ಪೊಲೀಸ್‌ ಬೀಟ್‌ ವ್ಯವಸ್ಥೆ ಸುಧಾರಣೆಯಾದ ‘ಸುಬಾಹು ಇ–ಬೀಟ್‌’ ಸೇವೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಬೆಂಗಳೂರಿನ ‘ಸ್ಮಾರ್ಟ್ ಸೆಕ್ಯೂರ್’ ಸಂಸ್ಥೆ ರೂಪಿಸಿರುವ ‘ಸುಬಾಹು ಇ- ಬೀಟ್’ ತಂತ್ರಾಂಶವನ್ನು ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದ ಹಾಲ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನ್‌ ಡಿ. ಪನ್ನೇಕರ್‌ ಅವರು ಅನಾವರಣಗೊಳಿಸಿದರು.

ಸುಮನ್‌ ಡಿ. ಪನ್ನೇಕರ್‌ ಮಾತನಾಡಿ, ‘ಗಸ್ತು ಸಿಬ್ಬಂದಿ ತಮ್ಮ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ತಿಳಿಯಲು ಈ ತಂತ್ರಾಂಶ ಸಹಕಾರಿ’ ಎಂದು ಹೇಳಿದರು.

ADVERTISEMENT

ಈ ಹಿಂದೆ ರಾತ್ರಿ ಗಸ್ತನ್ನು ಕೈಬರಹದ ಮೂಲಕ ದಾಖಲಿಸಲಾಗುತ್ತಿತ್ತು. ಸಿಬ್ಬಂದಿಗಳು ನಿಗದಿತ ಸ್ಥಳಗಳಿಗೆ ತೆರಳಿ ಅಲ್ಲಿ ಸಹಿ ಮಾಡುವ ವ್ಯವಸ್ಥೆಯಿತ್ತು. ಇದೀಗ ಸುಬಾಹು ಇ-ಬೀಟ್ ಮೂಲಕ ಸಿಬ್ಬಂದಿಗಳು ತಮ್ಮ ಸ್ಮಾರ್ಟ್ ಫೋನ್ ಬಳಸಿ ಕ್ಯು–ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ನಿಗದಿತ ಸ್ಥಳಗಳಲ್ಲಿ ಅಂದರೆ ಗಸ್ತು ತೆರಳುವ ಮಾರ್ಗಗಳಲ್ಲಿ ‘ಕ್ಯು ಆರ್ ಕೋಡ್’ ಅನ್ನು ಸಿಬ್ಬಂದಿಗಳು ಸ್ಕ್ಯಾನ್ ಮಾಡಬೇಕಿದೆ. ಇದರಿಂದ ಸಿಬ್ಬಂದಿಗಳೂ ಸಹ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಎಸ್‌ಪಿ ಹೇಳಿದರು.

ಸುಬಾಹು ತಂತ್ರಾಂಶ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ತಿಳಿಯಲು ಮಡಿಕೇರಿ ನಗರ, ಸೋಮವಾರಪೇಟೆ, ವಿರಾಜಪೇಟೆ, ಶನಿವಾರಸಂತೆ ಮತ್ತು ಗೋಣಿಕೊಪ್ಪಲಿನಲ್ಲಿ ಪೈಲೆಟ್ ಪ್ರಾಜೆಕ್ಟ್‌ ಅನ್ನು ಸಹ ನಡೆಸಲಾಗಿದ್ದು ತಂತ್ರಾಂಶವನ್ನು ಬಳಸಲು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಟ್ಟಾರೆ 16 ಠಾಣೆಗಳಲ್ಲಿಯೂ ಸಹ ಈ ತಂತ್ರಾಂಶ ಬಳಕೆಗೆ ಇದೀಗ ಚಾಲನೆ ನೀಡಲಾಗಿದೆ ಎಂದರು.

ಕೊಡಗು ಗುಡ್ಡಗಾಡು ಪ್ರದೇಶ. ಕೆಲವು ಕಡೆಗಳಲ್ಲಿ ಅಂತರ್ಜಾಲ ಸೇವೆ ದೊರೆಯುವುದಿಲ್ಲ. ಆದರೆ, ಈ ತಂತ್ರಾಂಶ ಅಂತಹ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿಗಳು ಭೇಟಿಕೊಟ್ಟಾಗ ಅಗತ್ಯ ಮಾಹಿತಿಗಳನ್ನು ತನ್ನಲ್ಲಿ ಸಂಗ್ರಹಿಸಿ ಇಂಟರ್‌ನೆಟ್ ಸೇವೆ ಸಿಗುವ ಪ್ರದೇಶದಿಂದ ಮತ್ತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ ಎಂದರು.

ಸ್ಮಾರ್ಟ್ ಸೆಕ್ಯೂರ್ ಸಂಸ್ಥೆಯ ಮಹೇಂದ್ರ ಅವರು, ಪೊಲೀಸ್ ಇಲಾಖೆಗೆ ಈ ತಂತ್ರಾಂಶದ ಬಳಕೆ ಅತ್ಯಂತ ಅವಶ್ಯಕವಾಗಿದೆ. ಸುಬಾಹು ಅಡ್ಮಿನ್ ಅನ್ನು ಹಿರಿಯ ಅಧಿಕಾರಿಗಳಿಗಾಗಿ ಮತ್ತು ಸುಬಾಹು ಬೀಟ್ ಅನ್ನು ಬೀಟ್ ಅಧಿಕಾರಿಗಳಿಗಾಗಿ ವಿನ್ಯಾಸಗೊಳಿಸಿದ್ದು ಮೊಬೈಲ್ ಮೂಲಕವೇ ಅನೇಕ ಮಾಹಿತಿ ಪಡೆಯಲು ಪೂರಕವಾಗಿದೆ ಎಂದರು.

ವಿರಾಜಪೇಟೆ ಉಪ ವಿಭಾಗದ ಡಿವೈಎಸ್‌ಪಿ ಜಯಕುಮಾರ್, ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ದಿನೇಶ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.