ADVERTISEMENT

ಮಡಿಕೇರಿ: ಶೋಭಾಯಾತ್ರೆಯಂದು ಜಿಲ್ಲಾಸ್ಪತ್ರೆ ರೋಗಿಗಳ ಸ್ಥಳಾಂತರ!

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2023, 7:24 IST
Last Updated 5 ನವೆಂಬರ್ 2023, 7:24 IST
ಕೆ.ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಕೆ.ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.   

ಮಡಿಕೇರಿ: ‘ಮಡಿಕೇರಿಯಲ್ಲಿ ಈಚೆಗೆ ನಡೆದ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಶಬ್ದದ ಧ್ವನಿವರ್ಧಕ ಬಳಸಿದ್ದರಿಂದಾಗಿ ಜಿಲ್ಲಾಸ್ಪತ್ರೆಯಿಂದ ಕೆಲವು ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ನಗರದ ಹಿರಿಯ ನಾಗರಿಕರು ಮನೆಗೆ ಬೀಗ ಹಾಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ’ ಎಂದು ಎಸ್ಪಿ ಕೆ.ರಾಮರಾಜನ್ ತಿಳಿಸಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಅವರು, ‘ಇಂತಹ ಘಟನೆಗಳು ಮುಂದಿನ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮರುಕಳಿಸಬಾರದು’ ಎಂದರು.

‘ಹತ್ತು ದೇವಾಲಯಗಳ ಸಮಿತಿಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಂದರ ಹಾಗೂ ಅರ್ಥಗರ್ಭಿತ ಮಂಟಪ ನಿರ್ಮಿಸಿದ್ದರು. ನೂಕುನುಗ್ಗಲಿನ ಮಧ್ಯೆ ಕೇವಲ ಎರಡು ಮಂಟಪಗಳನ್ನಷ್ಟೆ ನೋಡಲು ನನಗೆ ಸಾಧ್ಯವಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಶಕ್ತಿ ಇದ್ದವರಷ್ಟೇ ಮಡಿಕೇರಿ ದಸರೆ ನೋಡುವಂತಾಗಿದೆ. ಈಗ ಉತ್ಸವದಲ್ಲಿ ಬದಲಾವಣೆ ಮಾಡದೇ ಹೋದರೆ ಮುಂದೆ ಉತ್ಸವಕ್ಕೆ ಮಕ್ಕಳನ್ನು ಕರೆದುಕೊಂಡು ಬರಬಾರದು ಎಂದು ನಾಮಫಲಕ ಹಾಕಬೇಕಾದ ಸ್ಥಿತಿ ಬರಬಹುದು. ಅವೈಜ್ಞಾನಿಕ ಮಂಟಪಗಳ ನಿರ್ಮಾಣ ಒಂದಲ್ಲ ಒಂದು ದಿನ ಸಮಸ್ಯೆಯಾಗುತ್ತದೆ’ ಎಂದರು.

‘ವಿಶಾಲ ಮೈದಾನದಲ್ಲಿ ಎಲ್ಲರೂ ವ್ಯವಸ್ಥಿತವಾಗಿ ಕುಳಿತು ಎಲ್ಲ ಮಂಟಪಗಳ ಪ್ರದರ್ಶನಗಳನ್ನು ವೀಕ್ಷಿಸುವ ವ್ಯವಸ್ಥೆ ಆಗಬೇಕು. ಡಿ.ಜೆ. ಬಿಟ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ಕೊಡಬೇಕು’ ಎಂದು ಅಭಿಪ‍್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.