ಸೋಮವಾರಪೇಟೆ: ಸಾಮಾಜಿಕ ಮತ್ತು ಆರ್ಥಿಕ ಗಣತಿ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಕಾರ್ಯ ವಿಳಂಬ ಎಂದು ಆರೋಪಿಸಿ ನೋಟಿಸ್ ನೀಡಿರುವ ಕ್ರಮವನ್ನು ಖಂಡಿಸಿರುವ ಶಿಕ್ಷಕರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ವತಿಯಿಂದ ಬಿಇಒ ಕಚೇರಿ ಎದುರು ಸೋಮವಾರ ಪ್ರತಿಭಟಿಸಿ, ಕೂಡಲೇ ನೋಟಿಸ್ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಸಾಕಷ್ಟು ಸಮಸ್ಯೆಗಳ ನಡುವೆಯೂ ಶಿಕ್ಷಕರು ಗಣತಿಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಶೇ70ರಷ್ಟು ಗಣತಿ ಮುಗಿಸಿರುವ ಗಣತಿದಾರ ಶಿಕ್ಷಕರಿಗೆ ವಿನಾ ಕಾರಣ ನೋಟಿಸ್ ನೀಡಿ ಅವರಿಗೆ ಒತ್ತಡ ಹೇರಲಾಗುತ್ತಿದೆ. ಮೇಲಾಧಿಕಾರಿಗಳ ಒತ್ತಡ ಹಾಗೂ ಶಿಕ್ಷಕರಿಗೆ ನೀಡಿರುವ ನೋಟಿಸ್ನಿಂದ ಶಿಕ್ಷಕರು ಮಾನಸಿಕವಾಗಿ ಕುಗ್ಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ಬಂದೊದಗಿದೆ. ಕೂಡಲೇ ನೋಟಿಸ್ ಅನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ನಿಗದಿತ ಸಮಯದಲ್ಲಿ ಗಣತಿ ಕಾರ್ಯ ಮುಗಿಸಲು ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಬೇಕು. ಗಣತಿ ಪ್ರದೇಶದಲ್ಲಿ ಹಲವು ಮನೆಗಳು ಖಾಲಿ ಇದ್ದು, ಅವುಗಳನ್ನು ತಕ್ಷಣ ಆ್ಯಪ್ನಿಂದ ತೆಗೆಯಬೇಕು. ಬೇರೆ ಸಮೀಕ್ಷೆದಾರರು ಪೂರ್ಣಗೊಳಿಸಿರುವ ಯುಎಚ್ಐಡಿ ಸಂಖ್ಯೆಗಳನ್ನು ವೃಥಾ ಕೆಎಸ್ಬಿಸಿ ಆ್ಯಪ್ನಿಂದ ತೆಗೆಯಬೇಕು. ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇಲ್ಲದಿರುವ ಮನೆಗಳ ಯುಎಚ್ಐಡಿ ಸಂಖ್ಯೆಗಳನ್ನು ತೆಗೆದುಹಾಕಬೇಕು. ಉಳಿಕೆಯಾಗಿರುವ ಯುಎಚ್ಐಡಿ ಸಂಖ್ಯೆಗಳು ಗಣತಿದಾರರಿಗೆ ಸಿಗದೆ ಇರುವುದರಿಂದ, ನೆರವಿಗೆ ಸೆಸ್ಕ್ ಮೀಟರ್ ರೀಡರ್ಗಳನ್ನು ನಿಯೋಜನೆಮಾಡಬೇಕು ಎಂದು ಒತ್ತಾಯಿಸಿದರು.
ಉಳಿಕೆಯಾಗಿರುವ ಯುಎಚ್ಐಡಿ ಸಂಖ್ಯೆಗಳ ಮನೆಗಳ ವಿಳಾಸ ಮತ್ತು ಮೊಬೈಲ್ ಫೋನ್ ಸಂಖ್ಯೆ ನೀಡಬೇಕು. ಹಲವು ಮೇಲ್ವಿಚಾರಕರಿಂದ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ, ಇದನ್ನು ಸರಿಪಡಿಸಬೇಕು. ತಾಂತ್ರಿಕ ಸಿಬ್ಬಂದಿಗಳಿಂದ ಸರಿಯಾದ ರೀತಿಯಲ್ಲಿ ಸ್ಪಂದನೆ ಸಿಗುವಂತೆ ಮಾಡಬೇಕು. ಪೂರ್ಣ ಪ್ರಮಾಣದಲ್ಲಿ ಗಣತಿಯನ್ನು ಮಾಡಲು ಇನ್ನಷ್ಟು ಸಮಯವಕಾಶ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಿಇಒ ಕೃಷ್ಣಪ್ಪ ಇದ್ದರು. ಪ್ರತಿಭಟನಾ ಸಂದರ್ಭ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಜಿ. ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹೇಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್. ರತ್ನಕುಮಾರ್, ಕಾರ್ಯದರ್ಶಿ ಟಿ.ವಿ.ಶೈಲಾ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ಎನ್. ಮಂಜುನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಪ್ರಸನ್ನ, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ. ಬಸವರಾಜ್, ಕಾರ್ಯದರ್ಶಿ ಕವಿತ, ಮತ್ತಿತರ ಪದಾಧಿಕಾರಿಗಳು ಹಾಗೂ ನೂರಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.
06ಎಸ್ಪಿಟಿ01:
‘ಸಮಸ್ಯೆ ಬಗೆಹರಿಸಲಾಗುವುದು’
ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ಕೃಷ್ಣಮೂರ್ತಿ ಇಂದಿಗೂ ಕೆಲವರು ಸರಿಯಾದ ಗಣತಿ ಕೆಲಸ ಮಾಡುತ್ತಿಲ್ಲ ಎಂದು ಕೆಲವರಿಗೆ ನೋಟಿಸ್ ನೀಡಲಾಗಿದೆ. ಇದು ಯಾವುದೇ ಕ್ರಮಕ್ಕಾಗಿ ನೀಡಿಲ್ಲ. ತಕ್ಷಣ ನೋಟಿಸ್ ಹಿಂದಕ್ಕೆ ಪಡೆಯಲಾಗುವುದು. ಇಂದು ಸಂಜೆ ತಾಲ್ಲೂಕು ಕಚೇರಿಯಲ್ಲಿ ಸೆಸ್ಕ್ ಮತ್ತು ಸಂಬಂಧಿಸಿದ ಇಲಾಖೆಯೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಎಲ್ಲರೂ ಶೇ 100ರಷ್ಟು ಗಣತಿ ನಡೆಸಲು ಸಹಕರಿಸುವಂತೆ ಪ್ರತಿಭಟನಾಕಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.