ಕುಶಾಲನಗರ: ಪಟ್ಟಣದ ಟೋಲ್ ಗೇಟ್ ಬಳಿ ಇರುವ ಕಾವೇರಿ ಪ್ರತಿಮೆಗೆ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಾರವಿ ಕನ್ನಡ ಅಭಿಮಾನಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಕಾರ ಹುಣ್ಣಿಮೆಯ ಅಂಗವಾಗಿ ಗಡಿಭಾಗದ ಕಾವೇರಿ ದೇಗುಲದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ಕಾವೇರಿ ಪ್ರತಿಮೆಗೆ ಹಾಲು, ತುಪ್ಪ, ಅರಿಸಿನ, ಕುಂಕುಮಗಳಿಂದ ಅಭಿಷೇಕ ಮಾಡಲಾಯಿತು.
ಅರ್ಚಕ ಪುರುಷೋತ್ತಮ್ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಮಾಜದ ಸೇವಕರಾದ ರೇಖಾ ನಟರಾಜ್, ಕುಟುಂಬಸ್ಥರು ಪೂಜಾ ಸೇವಾರ್ಥ ನೆರವೇರಿಸಿದರು. ಸುನಂದಾ ಕೌಶಿಕ್ ಕಾವೇರಿ ಮಾತೆಗೆ ವಸ್ತ್ರ ವಿತರಿಸಿದರು.
ನಟರಾಜ್ ಮಾತನಾಡಿ, ‘ನದಿ ತೀರದ ನಿವಾಸಿಗಳು ಮತ್ತು ಸಾರ್ವಜನಿಕರು ನದಿಯ ಪಾವಿತ್ರ್ಯತೆಗೆ ಧಕ್ಕೆ ಭಾರದಂತೆ ಜಾಗೃತಿ ವಹಿಸಬೇಕು. ನದಿಯ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ಮೂಲದಲ್ಲಿಯೇ ಕಾವೇರಿ ಕಲುಷಿತಗೊಂಡು ಹರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ’ ಎಂದರು.
ಬಾರವಿ ಕನ್ನಡ ಅಭಿಮಾನಿಗಳ ಸಂಘದ ವತಿಯಿಂದ ನದಿ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸುತ್ತಿರುವ ಶ್ಲಾಘನೀಯ ಎಂದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಬಾರವಿ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಬಬಿಂದ್ರ ಪ್ರಸಾದ್, ಮುಖಂಡರಾದ ವಿಜಯೇಂದ್ರ ಪ್ರಸಾದ್, ಸೋಮಶೇಖರ್, ಚಂದ್ರು, ರುದ್ರ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.