ಶನಿವಾರಸಂತೆ: ‘ಸನಾತನ ಸಂಸ್ಕೃತಿ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಮಾನವ ಜನ್ಮ ಸಾರ್ಥಕಗೊಳ್ಳುತ್ತದೆ’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಶಾಖಾ ಮಠದ ಪೀಠಾಧ್ಯಕ್ಷ ಶಂಭುನಾಥ ಸ್ವಾಮೀಜಿ ಹೇಳಿದರು.
ಅವರು ಸಮಿಪದ ಮೂದರವಳ್ಳಿ ಗ್ರಾಮದಲ್ಲಿ ಜೀರ್ಣೋದ್ದಾರಗೊಂಡಿರುವ 600 ವರ್ಷಗಳ ಇತಿಹಾಸ ಇರುವ ಈಶ್ವರ ಮತ್ತು ಕಟ್ಟೆ ಬಸವಣ್ಣಸ್ವಾಮಿ ದೇವಸ್ಥಾನಗಳ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವನಲ್ಲಿ ಜ್ಞಾನದ ಬೆಳಕು ಇದ್ದಲ್ಲಿ ಬದುಕು ಸಾರ್ಥಕಗೊಳ್ಳುತ್ತದೆ. ಜ್ಞಾನದ ಶುದ್ದಿ, ಧಾರ್ಮಿಕ ಕಾರ್ಯಗಳಿಂದಲೂ ಬದುಕು ಹಸನಾಗುತ್ತದೆ ಎಂದರು.
ಗುರು-ಹಿರಿಯರು ನೀಡುವ ಮಾರ್ಗದರ್ಶನದಿಂದ ಮತ್ತು ಅವರು ನೀಡಿದ ಜ್ಞಾನದ ಶುದ್ದಿಯಿಂದ ನಾವು ಭಗವಂತನನ್ನು ಕಾಣಬಹುದು ಎಂದರು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಜನ್ಮ ನೀಡಿದ ತಾಯಿ ಸೇರಿದಂತೆ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು. ಇದರಿಂದ ತನ್ನ ಮನೆ ದೇಗುಲವಾಗುತ್ತದೆ. ಮನುಷ್ಯನಲ್ಲಿರುವ ಕ್ರೋಧ, ದ್ವೇಷವನ್ನು ಜ್ಞಾನದ ಬೆಳಕು ಮತ್ತು ಪರಿಶುದ್ದ ಮನಸ್ಸಿಗೆ ನಾಶ ಮಾಡುವ ಶಕ್ತಿ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಡಾ.ಮಂತರ್ಗೌಡ ಮಾತನಾಡಿ, ‘ದೇಗುಲಗಳನ್ನು ಕಟ್ಟಿದರೆ ಸಾಲದು. ವಾರದಲ್ಲಿ ಒಂದು ದಿನವಾದರೂ ದೇವಾಲಯಕ್ಕೆ ಬಂದು ದೇವರ ಆಶೀರ್ವಾದ ಪಡೆದುಕೊಳ್ಳಬೇಕು. ಇದರಿಂದ ಮನಸ್ಸಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ’ ಎಂದರು.
ಗ್ರಾಮಗಳಲ್ಲಿ ಕಟ್ಟುವ ದೇವಸ್ಥಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಸಹ ದೇವಸ್ಥಾನ ಸಮಿತಿಯ ಜವಾಬ್ದಾರಿಯಾಗುತ್ತದೆ. ಈ ನಿಟ್ಟಿನಲ್ಲಿ ದೇವಸ್ಥಾನ ಸಮಿತಿಯವರು ದೇವಸ್ಥಾನದ ಅಭಿವೃದ್ದಿಗಾಗಿ ಶ್ರಮಿಸಿದರೆ ದೇಗುಲಗಳು ಅಭಿವೃದ್ದಿ ಹೊಂದುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಮುಖಂಡರಾದ ಸಿ.ಪಿ.ಪುಟ್ಟರಾಜು, ಶುಂಠಿ ಭರತ್ಕುಮಾರ್, ಕಳಲೆ ಕೃಷ್ಣೇಗೌಡ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್, ತಾಲ್ಲೂಕು ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಬಾಗೇರಿ ಮಧು, ಎಂ.ಪಿ.ದಿನೇಶ್, ರೋಹಿತ್, ಪ್ರವೀಣ್ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಸದಸ್ಯೆ ಸುವರ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.