ADVERTISEMENT

ಕಾವೇರಿಯಲ್ಲಿ ಮುಳುಗಿ ವಿದ್ಯಾರ್ಥಿ ಕೃತಿಕ್ ಸಾವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 4:19 IST
Last Updated 27 ಫೆಬ್ರುವರಿ 2024, 4:19 IST
ಕುಶಾಲನಗರ ಸಮೀಪದ ಕಣಿವೆ ಬಳಿಯ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ‌ ಮೃತದೇಹವನ್ನು ರ‍್ಯಾಫ್ಟಿಂಗ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದರು
ಕುಶಾಲನಗರ ಸಮೀಪದ ಕಣಿವೆ ಬಳಿಯ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ‌ ಮೃತದೇಹವನ್ನು ರ‍್ಯಾಫ್ಟಿಂಗ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದರು   

ಕುಶಾಲನಗರ: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಣಿವೆ ಬಳಿ ಕಾವೇರಿ ನದಿಯಲ್ಲಿ ಸೋಮವಾರ ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ.

ಮೈಸೂರು ಬಿಳಿಗೆರೆ ಸಮೀಪದ ರಂಗಯ್ಯನ ಕೊಪ್ಪಲು ಗ್ರಾಮದ ಪ್ರಥಮ‌ ಪಿಯು ವಿದ್ಯಾರ್ಥಿ ಕೃತಿಕ್ (16) ಮೃತಪಟ್ಟವರು.

ಘಟನೆ ವಿವರ: ರಂಗಯ್ಯನಕೊಪ್ಪಲು ಗ್ರಾಮದ ಕೃತಿಕ್ ಪಿರಿಯಾಪಟ್ಟಣದ ಸ್ನೇಹಿತನ ಮನೆಗೆ ಬಂದಿದ್ದರು. ನಂತರ ಗೆಳೆಯರೊಂದಿಗೆ ಬೆಟ್ಟದಪುರ ಬೆಟ್ಟ ಹತ್ತಿ ಮಲ್ಲಿಕಾರ್ಜುನ ಸ್ವಾಮಿ ದೇವರ ದರ್ಶನ ಪಡೆದು ಮೈಸೂರು- ಕೊಡಗು ಗಡಿಯಲ್ಲಿ ಹರಿಯುವ ಕಾವೇರಿ ನದಿಗೆ ಬಂದಿದ್ದಾರೆ.

ADVERTISEMENT

ಕಣಿವೆ ಬಳಿಯ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಹರಿಯುತ್ತಿರುವ ಕಾವೇರಿ ನದಿಗೆ ಮೂವರು ವಿದ್ಯಾರ್ಥಿಗಳು ನದಿಯಲ್ಲಿ ಕಲ್ಲುಗಳ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಕೃತಿಕ್ ಕಾಲು ಜಾರಿ ಆಳವಾದ ಜಾಗದಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಅಗ್ನಿಶಾಮಕ ದಳ‌ ಹಾಗೂ ದುಬಾರೆ ರ‍್ಯಾಫ್ಟಿಂಗ್ ಸಿಬ್ಬಂದಿ ನೆರವಿನಿಂದ ಮೃತದೇಹ ಪತ್ತೆ ಹಚ್ಚಲಾಯಿತು.

ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.